ADVERTISEMENT

ಧಾರವಾಡ | ಕನ್ನಡತನವೇ ಕನ್ನಡಿಗನ ಪ್ರಥಮ ಕರ್ತವ್ಯ: ಡಾ. ಗುರುಲಿಂಗ ಕಾಪಸೆ

ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 6:23 IST
Last Updated 9 ನವೆಂಬರ್ 2022, 6:23 IST
ಧಾರವಾಡದ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್ ಇತ್ತೀಚೆಗೆ ಆಯೋಜಿಸಿದ್ದ 2ಕಿ.ಮೀ. ಉದ್ದ ಕನ್ನಡ ಧ್ವಜವನ್ನು ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಹಿಡಿದು ಸಾಗಿದರು
ಧಾರವಾಡದ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್ ಇತ್ತೀಚೆಗೆ ಆಯೋಜಿಸಿದ್ದ 2ಕಿ.ಮೀ. ಉದ್ದ ಕನ್ನಡ ಧ್ವಜವನ್ನು ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಹಿಡಿದು ಸಾಗಿದರು   

ಧಾರವಾಡ: ‘ಪ್ರತಿಯೊಬ್ಬ ಕನ್ನಡಿಗನೂ ತನ್ನ ಜೀವಿತಾವಧಿ ಉದ್ದಕ್ಕೂ ಕನ್ನಡತನದಲ್ಲೇ ಜೀವಿಸುವುದೇ ಪ್ರಥಮ ಕರ್ತವ್ಯವೆಂಬ ಸತ್ಯವನ್ನು ಅರಿತುಕೊಳ್ಳಬೇಕು’ ಎಂದು ಹಿರಿಯ ವಿದ್ವಾಂಸ ಡಾ. ಗುರುಲಿಂಗ ಕಾಪಸೆ ಹೇಳಿದರು.

67ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್‌ನ ರಜತ ಮಹೋತ್ಸವದ ಅಂಗವಾಗಿ ಕ್ಲಾಸಿಕ್ ಸಂಸ್ಥೆಯಿಂದ ಕಲಾಭವನ ಆರವಣದಲ್ಲಿ ಆಯೋಜಿಸಲಾಗಿದ್ದ 2 ಕಿ.ಮೀ. ಉದ್ದದ ಕನ್ನಡ ಬಾವುಟದೊಂದಿಗಿನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡವು ಇಂದು ಜಗತ್ತೇ ಪ್ರೀತಿಸುವ ಭಾಷೆಯಾಗಿದೆ. ಅತೀ ಹಚ್ಚು ಜ್ಞಾನಪೀಠ ಪುರಸ್ಕಾರಗಳಿಗೆ ಪಾತ್ರವಾಗಿರುವ ಭಾಷೆ ಕನ್ನಡವೆಂಬುದು ಅತ್ಯಂತ ಹೆಮ್ಮೆಯ ವಿಷಯ. ಹೋರಾಟಗಾರರು, ಕವಿ, ಕಲಾವಿದರು ಸಾಹಿತಿಗಳಾದಿಯಾಗಿ ಜನಪದರು ಕನ್ನಡದ ಹಿರಿಮೆ ಗರಿಮೆಗಳನ್ನು ಹೆಚ್ಚಿಸಿದ್ದಾರೆ’ ಎಂದರು.

ADVERTISEMENT

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ‘ಕನ್ನಡಿಗರಾದ ನಾವೆಲ್ಲರೂ ನಿರಂತರವಾಗಿ ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಂಡು ಕನ್ನಡವನ್ನು ನಮ್ಮೆಲ್ಲರಲ್ಲಿ ಗಟ್ಟಿಗೊಳಿಸಿಕೊಳ್ಳಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ ಲಕ್ಷ್ಮಣ ಎಸ್. ಉಪ್ಪಾರ ಮಾತನಾಡಿ, ‘ಕನ್ನಡಾಂಬೆಯ ಸೇವೆಗೆ ಸಂಸ್ಥೆ ಸದಾ ಸಿದ್ಧವಿದ್ದು, ಕನ್ನಡದ ಚಟುವಟಿಕೆಗಳ ಜತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ25 ವರ್ಷಗಳನ್ನು ಪೂರೈಸಲಾಗಿದೆ. ಈ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಸದ್ಯದಲ್ಲೇ ಆಚರಿಸಲಾಗುವುದು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ,ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಇದ್ದರು. ಮನಸೂರಿನ ರೇವಣ ಸಿದ್ಧೇಶ್ವರ ಮಠದ ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು.

2 ಕಿ.ಮೀ. ಉದ್ದದ ಕನ್ನಡ ಬಾವುಟ ಹಾಗೂ ಜಾನಪದ ಕಲಾ ತಂಡಗಳೊಂದಿಗೆ ಕ್ಲಾಸಿಕ್ ಸಂಸ್ಥೆಯ ಶಾಲಾ ಕಾಲೇಜು ಹಾಗೂ ತರಬೇತಿ ಕೇಂದ್ರದ ವಿದ್ಯಾರ್ಥಿಗಳು, ಸಿಬ್ಬಂದಿ, ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕನ್ನಡ ಧ್ವಜ ಹಿಡಿದು ಜಾಥಾದಲ್ಲಿ ಪಾಲ್ಗೊಂಡರು. ಕಲಾಭವನದಿಂದ ಆರಂಭವಾಗಿ ತಪೋವನ ಆಶ್ರಮ ಬಳಿಯ ಕ್ಲಾಸಿಕ್ ಶಾಲೆ ಆವರಣದವರೆಗೆ ಸುಮಾರು 5 ಕಿ.ಮೀ. ಜಾಥಾದಲ್ಲಿ ಕನ್ನಡಪರ ಘೋಷಣೆಗಳು ಮೊಳಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.