ADVERTISEMENT

ರಾಜೀವ್ ಗಾಂಧಿಗೆ ಯಾವ ಅರ್ಹತೆ ಮೇಲೆ ಭಾರತ ರತ್ನ ಕೊಟ್ರಿ: ಜೋಶಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 7:32 IST
Last Updated 19 ಅಕ್ಟೋಬರ್ 2019, 7:32 IST
ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ   

ಹುಬ್ಬಳ್ಳಿ: 'ಕಾಂಗ್ರೆಸ್‌ನವರು ರಾಜೀವ್‌ ಗಾಂಧಿ ಅವರಿಗೆ ಭಾರತ ರತ್ನ ಕೊಟ್ಟ ಬಳಿಕ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಕೊಟ್ಟರು. ರಾಜೀವ್ ಗಾಂಧಿ ಅವರಿಗೆ ಯಾವ ಅರ್ಹತೆಯ ಆಧಾರದ ಮೇಲೆ ದೇಶದ ಅತ್ಯುನ್ನತ ಪದವಿಯನ್ನು ಕಾಂಗ್ರೆಸ್ ಕೊಟ್ಟಿತು? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿ ಅವರ ತಾತ ಜವಾಹರಲಾಲ್ ನೆಹರೂ ಮತ್ತು ತಾಯಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದೇ ರಾಜೀವ್ ಅವರಿಗೆ ಪ್ರಧಾನಿ ಹುದ್ದೆ ಒಲಿಯಲು ಕಾರಣ. ದೇಶಕ್ಕೆ ಯಾವುದೇ ಕೊಡುಗೆ ನೀಡದಿದ್ದರೂ ಅವರಿಗೆ ಭಾರತ ರತ್ನ ಕೊಟ್ಟ ಕಾಂಗ್ರೆಸ್, ಇದೀಗ ಅಪ್ರತಿಮ ದೇಶಭಕ್ತ ವೀರ ಸಾವರ್ಕರ್ ಅವರ ಹೆಸರು ಪ್ರಸ್ತಾಪಿಸಿದ್ದಕ್ಕೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದರು.

ಅರ್ಹತೆ ಇರುವವರಿಗೆ ಭಾರತ ರತ್ನ ನೀಡದ ಕಾಂಗ್ರೆಸ್ ಸರ್ಕಾರ ಈಗೇನಾದರೂ ಇದ್ದಿದ್ದರೆ ದಾವುದ್ ಮೆಮನ್ ಗೂ ಕೊಡುತ್ತಿದ್ದರು ಎಂದರು.

ADVERTISEMENT

ಸಿದ್ದರಾಮಯ್ಯ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಇದನ್ನು ಪ್ರಶ್ನಿಸುವ ಗಟ್ಸ್ ಯಾಕೆ‌ ತೋರಲಿಲ್ಲ ಎಂದ ಅವರು, ಸಿದ್ದರಾಮಯ್ಯ ಇತಿಹಾಸವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಸಾವರ್ಕರ್ ಅವರ ಹೆಸರನ್ನು ಮಹಾರಾಷ್ಟ್ರ ಸರ್ಕಾರ ಪ್ರಸ್ತಾಸಿಪಿದೆ. ಆ ವಿಷಯವನ್ನು ರಾಜ್ಯಕ್ಕೆ ತಂದು ಈ ರೀತಿ ಮಾತನಾಡುವುದು ಸರಿಯಲ್ಲ ಎಂದ ಅವರು, ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡುವ ಬಗ್ಗೆ ಸಂದರ್ಭ ಬಂದಾಗ ನಾವು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬೆಂಗಳೂರಿನಲ್ಲಿ ರೈತರ ಧರಣಿ ಬಗ್ಗೆ ಮಾಹಿತಿ ಇಲ್ಲ‘

ಮಹಾದಾಯಿಗೆ ಅಧಿಸೂಚನೆ ಹೊರಡಿಸುವ ಸಂಬಂಧ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಯತ್ನ ನಡೆಸುತ್ತಿವೆ. ಬೆಂಗಳೂರಿನಲ್ಲಿ ಮಹದಾಯಿ ಅಧಿಸೂಚನೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಧರಣಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.