ಹುಬ್ಬಳ್ಳಿ: ನಗರದ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಅವರಣದಲ್ಲಿ ಮಂಗಳವಾರ ವಿರೋಧ ಪಕ್ಷದ ನಾಯಕ ದೊರೆರಾವ್ ಮಣಿಕುಂಟ್ಲ ಅವರ ನವೀಕೃತ ಕಚೇರಿ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಚಿಕನ್ ಬಿರಿಯಾನಿ ಹಾಗೂ ಕಬಾಬ್ನ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ಪ್ರಸಾದ ಅಬ್ಬಯ್ಯ ಅವರು ಕಚೇರಿ ಉದ್ಘಾಟಿಸಿದರು.ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಮೇಯರ್ ಈರೇಶ ಅಂಚಟಗೇರಿ, ಉಪ ಮೇಯರ್ ಉಮಾ ಮುಕುಂದ, ಸಭಾ ನಾಯಕ ತಿಪ್ಪಣ್ಣ ಮಜ್ಜಗಿ ಹಾಗೂ ಕಾಂಗ್ರೆಸ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ಸಮುದಾಯಗಳ ಮುಖಂಡರು ಕಚೇರಿಗೆ ಭೇಟಿ ನೀಡಿ ಮಣಿಕುಂಟ್ಲ ಅವರಿಗೆ ಶುಭ ಕೋರಿದರು. ಗಣ್ಯರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಚೇರಿ ಉದ್ಘಾಟನೆ ಅಂಗವಾಗಿ ಮಣಿಕುಂಟ್ಲ ಅವರು, ಪಾಲಿಕೆ ಆವರಣದಲ್ಲೇ ಶಾಮಿಯಾನ ಹಾಕಿಸಿ ಬಿರಿಯಾನಿ ಮತ್ತು ಕಬಾಬ್ ಅಡುಗೆ ಮಾಡಿಸಿದ್ದರು. ಉದ್ಘಾಟನೆ ಮುಗಿಯುತ್ತಿದ್ದಂತೆ ಬಿರಿಯಾನಿ ಸವಿಯಲು ಜನರು ಸಾಲುಗಟ್ಟಿ ನಿಂತಿದ್ದರು.ಕಾರ್ಯಕ್ರಮದಲ್ಲಿ ಮಣಿಕುಂಟ್ಲ ಅವರ ಸಂಬಂಧಿಕರು, ವಾರ್ಡ್ ಜನರು, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.