ವಿನೋದ ಅಸೂಟಿ
ನವಲಗುಂದ: ಕಳೆದ ವರ್ಷ ಹುಬ್ಬಳ್ಳಿ ನಗರದಲ್ಲಿ ನಡೆದ ನೇಹಾ ಹಾಗೂ ಅಂಜಲಿ ಅವರ ಹತ್ಯೆ ಪ್ರಕರಣವನ್ನು ಬಿಜೆಪಿ ನಾಯಕರು ಸಂಪೂರ್ಣವಾಗಿ ಮರೆತುಹೋಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಈ ವಿದ್ಯಾರ್ಥಿನಿಯರ ಹತ್ಯೆಯಾದ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿತ್ತು. ಇದನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ ನಾಯಕರು ಸಂತ್ರಸ್ತರ ಮನೆಗೆ ಭೇಟಿ ನೀಡಿ, ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಈಗ ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ಆ ನಾಯಕರು ತಾವು ನೀಡಿದ್ದ ಭರವಸೆಯನ್ನು ಮರೆತು ಹೋಗಿದ್ದಾರೆ‘ ಎಂದು ವ್ಯಂಗ್ಯವಾಡಿದ್ದಾರೆ.
ಎನ್ಡಿಎದಿಂದ ರಾಜ್ಯದ 19 ಜನ ಸಂಸದರಾಗಿದ್ದಾರೆ. ಅದರಲ್ಲಿ ಮೂವರು ಕೇಂದ್ರ ಸಚಿವರೂ ಆಗಿದ್ದಾರೆ. ಆದರೆ ತಮ್ಮ ರಾಜ್ಯದಲ್ಲೇ ಘಟಿಸಿದ ಇಂತಹ ಹೇಯ ಕೃತ್ಯದಲ್ಲಿ ಪ್ರಾಣ ಕಳೆದುಕೊಂಡ ಯುವತಿಯರ ಸಾವಿನ ಕುರಿತು, ಅವರ ಕುಟುಂಬಕ್ಕೆ ನ್ಯಾಯ ಕೊಡಿಸುವ ಕುರಿತು ಎಲ್ಲಿಯೂ ಚಕಾರ ಎತ್ತಿಲ್ಲ. ಇನ್ನಾದರೂ ಈ ಸಾವಿಗೆ ನ್ಯಾಯ ಒದಗಿಸಲು ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಬೇಕು. ಅಲ್ಲದೇ ಈ ಕೃತ್ಯ ಮಾಡಿದವರಿಗೆ ಉಗ್ರ ಶಿಕ್ಷೆ ಕೊಡಿಸಬೇಕು. ಅಂದಾಗ ಮಾತ್ರ ದೇಶದಲ್ಲಿ ಈ ರೀತಿಯ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ. ಬಿಜೆಪಿ ನಾಯಕರು ಚುನಾವಣೆ ಬಂದಾಗ ಒಂದು ಬಣ್ಣ, ಅಧಿಕಾರ ಬಂದ ನಂತರ ಮತ್ತೊಂದು ಬಣ್ಣ ತೋರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.