ಹುಬ್ಬಳ್ಳಿ: 'ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದ ವರಿಷ್ಠರ ನಿರ್ಧಾರದಲ್ಲಿ ಇನ್ನೂ ಗೊಂದಲಗಳಿವೆ. ಆ ಕುರಿತು ಅವರಿಂದ ಈವರೆಗೆ ಯಾವುದೇ ಸ್ಪಷ್ಟ ಸೂಚನೆ ಬಂದಿಲ್ಲ' ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ವರಿಷ್ಠರು ಏನು ಹೇಳುತ್ತಾರೋ ಅದನ್ನು ಮಾಡುತ್ತೇನೆ ಎಂದು ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ಆದಷ್ಟು ಬೇಗ ಗೊಂದಲ ಬಗೆಹರಿಯಲಿದೆ' ಎಂದರು.
'75 ವರ್ಷ ಮೇಲ್ಪಟ್ಟವರು ಅಧಿಕಾರದಲ್ಲಿ ಇರಬಾರದು ಎಂದು ಬಿಜೆಪಿ ತತ್ವ ಸಿದ್ಧಾಂತದಲ್ಲಿ ಎಲ್ಲಿಯೂ ಇಲ್ಲ. ಬಿ.ಎಸ್. ಯಡಿಯೂರಪ್ಪ ಅವರು 75 ವರ್ಷ ಆದ ಮೇಲೆಯೇ ಈ ಅವಧಿಗೆ ಮುಖ್ಯಮಂತ್ರಿಯಾಗಿದ್ದು' ಎಂದು ಹೇಳಿದರು.
'ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಬಸವರಾಜ ಬೊಮ್ಮಾಯಿ ಒಂದೇ ಕ್ಷೇತ್ರದವರು. ಅವರು ಆಗಾಗ ಭೇಟಿ ಆಗುತ್ತಲೇ ಇರುತ್ತಾರೆ. ಈ ಹಿಂದೆಯೂ ಅವರು ಸಾಕಷ್ಟು ಬಾರಿ ಭೇಟಿಯಾಗಿದ್ದಾರೆ. ಅವರ ಈಗಿನ ಭೇಟಿಯನ್ನು ಪಾಕಿಸ್ತಾನ, ಭಾರತದವರು ಒಬ್ಬರನ್ನೊಬ್ಬರು ಭೇಟಿಯಾದ ಹಾಗೆ ಬಿಂಬಿಸಲಾಗುತ್ತಿದೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ' ಎಂದು ಶೆಟ್ಟರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.