ADVERTISEMENT

ಹುಬ್ಬಳ್ಳಿ: ರಸ್ತೆ ಗುಂಡಿಗಳಲ್ಲಿ ದೋಣಿ ಬಿಡುವ ಸ್ಪರ್ಧೆ!

ಯೂತ್ ಕಾಂಗ್ರೆಸ್‌ನಿಂದ ವಿನೂತನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 14:49 IST
Last Updated 12 ಅಕ್ಟೋಬರ್ 2020, 14:49 IST
ಹುಬ್ಬಳ್ಳಿಯ ನ್ಯೂ ಕಾಟನ್‌ ಮಾರ್ಕೆಟ್ ರಸ್ತೆಯ ಗುಂಡಿಯಲ್ಲಿ ಕಾಗದದ ದೋಣಿ ಬಿಡುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಹಾಗೂ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರು
ಹುಬ್ಬಳ್ಳಿಯ ನ್ಯೂ ಕಾಟನ್‌ ಮಾರ್ಕೆಟ್ ರಸ್ತೆಯ ಗುಂಡಿಯಲ್ಲಿ ಕಾಗದದ ದೋಣಿ ಬಿಡುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಹಾಗೂ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರು   

ಹುಬ್ಬಳ್ಳಿ: ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಲು ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಯೂತ್‌ ಕಾಂಗ್ರೆಸ್ ವತಿಯಿಂದ ಸೋಮವಾರ ನ್ಯೂ ಕಾಟನ್‌ ಮಾರ್ಕೆಟ್‌ ರಸ್ತೆಯಲ್ಲಿ ಮಕ್ಕಳಿಗೆ ರಸ್ತೆ ಗುಂಡಿಯಲ್ಲಿ ದೋಣಿ ಬಿಡುವ ಸ್ಪರ್ಧೆ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳನ್ನು ಕಾಗದದ ಮೇಲೆ ಬಿಡಿಸಿ ಅವುಗಳನ್ನು ದೋಣಿ ಮಾಡಿ ರಸ್ತೆಯ ಗುಂಡಿಗಳಲ್ಲಿ ತುಂಬಿಕೊಂಡಿದ್ದ ನೀರಿನ ಮೇಲೆ ಹರಿ ಬಿಡಲಾಯಿತು. ಕೆಲ ಮಕ್ಕಳು ಪ್ಲಾಸ್ಟಿಕ್‌ ದೋಣಿಗಳಲ್ಲಿ ಶೆಟ್ಟರ್ ಚಿತ್ರ ಇಟ್ಟುಕೊಂಡು ಆಟವಾಡಿದರು. ಶೆಟ್ಟರ್ ಖುರ್ಚಿ ಮೇಲೆ ಕುಳಿತು ಟಿ.ವಿ. ನೋಡುತ್ತಿರುವ ಚಿತ್ರವನ್ನೂ ನೀರಿನಲ್ಲಿ ಬಿಡಲಾಯಿತು.

ಈ ವೇಳೆ ಮಾತನಾಡಿದ ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜತ್‌ ಉಳ್ಳಾಗಡ್ಡಿಮಠ ‘ಶೆಟ್ಟರ್‌ ಅವರ ನಿರ್ಲಕ್ಷ್ಯದಿಂದಾಗಿ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಹುಬ್ಬಳ್ಳಿಯಲ್ಲಿ ಕೆಟ್ಟು ಹೋದ ರಸ್ತೆಗಳನ್ನು ದುರಸ್ತಿ ಮಾಡಿಸುವಂತೆ ಹಲವಾರು ಬಾರಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಕಾರ್ಯೋನ್ಮುಖರಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪಕ್ಷದ ಪ್ರಮುಖರಾದ ಚೇತನ ಬಿಜವಾಡ, ಶಹಜನಾಮ್‌ ಮುಜಾಹಿದ್‌, ಲಕ್ಷ್ಮಣ್‌ ಗಡ್ಡಿ, ಮಣಿಕಂಠ ಪಿರಗೋಜಿ, ನವೀನ ಶಿಶನಳ್ಳಿ, ಪ್ರಜ್ವಲ್‌ ಮೋರೆ, ಹಜರತ್‌ ತಲ್ವಾಯಿ ಮತ್ತು ಶ್ರೀನಿವಾಸ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.