
ಅಳ್ನಾವರ: ಸರ್ಕಾರದ ಮಾನದಂಡದ ಅನ್ವಯ ಇಲ್ಲದ ಬಿಪಿಎಲ್ ಪಡಿತರದಾರರು ಸ್ವಇಚ್ಛೆಯಿಂದ ತಮ್ಮ ಕಾರ್ಡ್ ಅನ್ನು ಮರಳಿಸುವಂತೆ ಜಾಗೃತಿ ಮೂಡಿಸಲು ಮಂಗಳವಾರ ಇಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ, ಸರ್ಕಾರದ ಮಾನದಂಡಗಳ ಪ್ರಕಾರ ಅರ್ಹ ಫಲಾನುಭವಿಗಳನ್ನು ಹೊರತುಪಡಿಸಿ, ಅನಧಿಕೃತ ಪಡಿತರ ಚೀಟಿ ಹೊಂದಿರುವವರು ಸಾಕಷ್ಟು ಜನ ಇದ್ದು, ಅಂತವರ ಪಟ್ಟಿಯನ್ನು ಪಡಿತರ ವಿತರಣಾ ಕೇಂದ್ರದಲ್ಲಿ ಪ್ರಕಟಿಸಲಾಗಿದೆ ಎಂದು ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ವಿನಾಯಕ ಕುರುಬರ ತಿಳಿಸಿದರು.
‘ಗ್ರಾಮೀಣ ಬಸ್ ಸೇವೆಗೆ ಸಾಕಷ್ಟು ಒತ್ತು ನೀಡಲಾಗಿದೆ. ಕಾಡಂಚಿನ ಭಾಗದ ಬೆಣಚಿ, ಕಿವಡೆಬೈಲ್, ಡೋರಿ ಗ್ರಾಮಗಳಿಗೆ ಶಾಲಾ ಸಮಯಕ್ಕೆ ಬಸ್ ಓಡಿಸಲು ಸೂಚಿಸಲಾಗಿದೆ’ ಎಂದರು.
ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಬಾರದು. ಗ್ರಾಮೀಣ ಭಾಗದಲ್ಲಿ ಅನಧಿಕೃತ ವಿದ್ಯುತ್ ಸಂಪರ್ಕ ಹೊಂದಿದವರು ಇಲಾಖೆಗೆ ನಿಗದಿತ ಶುಲ್ಕ ಭರಿಸಿ ಸಕ್ರಮಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಪ್ರಕಾಶ ಹಾಲಮತ್ ಮಾತನಾಡಿದರು. ಆಹಾರ ಇಲಾಖೆಯ ನೀರಿಕ್ಷಕ ವಿನಾಯಕ ದೀಕ್ಷಿತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಿಲ್ಪಾ ತರಗಾರ, ಹೆಸ್ಕಾಂ ಕಾರ್ಯಪಾಲಕ ಎಂಜಿನಿಯರ ಗುಲ್ಜಾರ್ ಹಾಗೂ ಹಳಿಯಾಳ ಬಸ್ ಡಿಪೊ, ಕೌಶಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವರದಿ ಸಲ್ಲಿಸಿದರು.
ಸಮಿತಿ ಸದಸ್ಯರಾದ ರಾಜು ಪನ್ನಾಳಕರ, ಫಕ್ಕೀರಪ್ಪ ದಬಾಲಿ, ಕಲ್ಮೇಶ ಬಡಿಗೇರ, ಶಂಕರ ಕಲಾಜ, ಸತೀಶ ಬಡಿಗೇರ, ಎಂ.ಕೆ. ಬಾಗವಾನ, ಪುಷ್ಪಾ ಆನಂತಪುರ, ಸಲೀಂ ತಡಕೋಡ, ಮಹಾಂತೇಶ ಬೋರಿಮನಿ, ರಾಹುಲ್ ಶಿಂದೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.