ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವ ಭೀತಿಯಿಂದ ಎರಡೂವರೆ ತಿಂಗಳ ಹಿಂದೆ ಸಂಚಾರ ನಿಲ್ಲಿಸಿದ್ದ ಹುಬ್ಬಳ್ಳಿ–ಧಾರವಾಡ ನಡುವಿನ ತ್ವರಿತ ಬಸ್ ಸಾರಿಗೆ ಸೇವೆ (ಬಿಆರ್ಟಿಎಸ್) ಶುಕ್ರವಾರ ಪುನರಾರಂಭವಾಗಲಿದೆ.
ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9ರ ತನಕ ’ಚಿಗರಿ’ ಸಂಚಾರ ಇರಲಿದ್ದು, ಕೋವಿಡ್ 19 ನಿಯಮಾವಳಿಗಳ ಪ್ರಕಾರ ಬಸ್ ಒಳಗೆ 24ರಿಂದ 27 ಡಿಗ್ಸಿ ಸೆಲ್ಸಿಯಸ್ ಹವಾ ನಿಯಂತ್ರಿತ (ಎಸಿ) ಇರಬೇಕು. ಮೊದಲ ದಿನ ಪ್ರಾಯೋಗಿಕವಾಗಿ 30ರಿಂದ 35 ಬಸ್ಗಳು ಸಂಚರಿಸಲಿವೆ.
ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಿಂದ ಧಾರವಾಡದ ಮಿತ್ರ ಸಮಾಜದ ತನಕ ಬಸ್ ಸಂಚರಿಸಲಿವೆ. ಬಸ್ ದರದಲ್ಲಿ ಬದಲಾವಣೆ ಇರುವುದಿಲ್ಲ. ಬಸ್ ನಿಲ್ದಾಣಗಳಲ್ಲಿ ಟಿಕೆಟ್ಗಾಗಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಪ್ರಯಾಣಿಕರು ನಗದು ಬಳಸುವ ಬದಲು, ಸ್ಮಾರ್ಟ್ ಕಾರ್ಡ್ಗಳನ್ನು ಹೆಚ್ಚಾಗಿ ಬಳಸಿ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವರಾಧ್ಯ ತಿಳಿಸಿದ್ದಾರೆ.
ಪ್ರಯಾಣಿಕರು ಹಾಗೂ ಬಿಆರ್ಟಿಎಸ್ ಸಿಬ್ಬಂದಿ ಮಾಸ್ಕ್ಗಳನ್ನು ಧರಿಸಬೇಕು, ಬಸ್ ನಿಲ್ದಾಣಗಳಲ್ಲಿನ ಸಿಬ್ಬಂದಿ ಪ್ರಯಾಣಿಕರ ಕೈಗಳಿಗೆ ಸ್ಯಾನಿಟೈಸರ್ ಹಚ್ಚಬೇಕು, ಅಂತರ ಕಾಯ್ದುಕೊಳ್ಳಬೇಕು. ಮಾರ್ಚ್ 21ರ ನಂತರ ಮಾನ್ಯತೆ ಹೊಂದಿದ ಮಾಸಿಕ ಬಸ್ ಪಾಸ್ ಕಾರ್ಡ್ ಹೊಂದಿರುವ ಪ್ರಯಾಣಿಕರು ಜೂನ್ 13ರ ವರೆಗೆ ಪ್ರಯಾಣದ ಅವಧಿಯಲ್ಲಿ ಸ್ಮಾರ್ಟ್ ಕಾರ್ಡ್ ತೋರಿಸಿ ಟಿಕೆಟ್ಗಳನ್ನು ಪಡೆದುಕೊಳ್ಳಬಹುದು. ಬಸ್ನಲ್ಲಿ ಸೀಟುಗಳಿರುವಷ್ಟೇ ಪ್ರಯಾಣಿಕರಿಗೆ ಅವಕಾಶವಿರುತ್ತದೆ ಎಂದು ಅವರು ಹೇಳಿದ್ದಾರೆ.
ಸಿದ್ಧತೆ: ಗುರುವಾರ ಸಂಜೆ ಬಿಆರ್ಟಿಎಸ್ ಬಸ್ ನಿಲ್ದಾಣಗಳನ್ನು ಮತ್ತು ಟಿಕೆಟ್ ಕೌಂಟರ್ಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದಿತ್ತು. ಗೋಕುಲ ರಸ್ತೆಯಲ್ಲಿರುವ ಬಸ್ ಡಿಪೊದಲ್ಲಿ ಚಿಗರಿ ಬಸ್ಗಳಿಗೆ ರಾಸಾಯನಿಕ ಮಿಶ್ರಿತ ಔಷಧ ಸಿಂಪಡಣೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.