ಹುಬ್ಬಳ್ಳಿ: ತಾಯಿ ತೀರಿಕೊಂಡರೂ ಸಿ.ಎನ್. ನಾಯಕ್ ಎಂಬುವರು ಹುಬ್ಬಳ್ಳಿಯ ಭವಾನಿನಗರದ ಮತಗಟ್ಟೆಯಲ್ಲಿ ಮಂಗಳವಾರ ಮತದಾನ ಮಾಡಿದರು.
‘ತಾಯಿ ವಿಮಲಾ ನಾಯಕ್ ಅವರು ನಸುಕಿನಲ್ಲಿ ತೀರಿಕೊಂಡರು. ಮತದಾನ ಮಾಡಲೇಬೇಕು ಎಂದು ಬೆಳಿಗ್ಗೆಯೇ ಬಂದು ವೋಟ್ ಹಾಕಿದೆ’ಎಂದು ನಾಯಕ್ ತಿಳಿಸಿದರು. ನಾಯಕ್ ಅವರ ಪತ್ನಿ ಇಂದಿರಾ ನಾಯಕ್ ಅವರೂಮತ ಚಲಾಯಿಸಿದರು.
ಹುಬ್ಬಳ್ಳಿಯಲ್ಲಿ ಮತದಾರರ ಉತ್ಸಾಹ:ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಮತದಾರರು ತುಂಬ ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದರು.
ಭವಾನಿನಗರದ ಬೂತ್ ಸಂಖ್ಯೆ 108 , 109, 110, 111, 112, 113ರಲ್ಲಿ ಮತದಾನಕ್ಕೆ ಜನರು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಒಂಬತ್ತು ಗಂಟೆ ವೇಳೆಗೆ ಜನಜಂಗುಳಿಯಾಗಿತ್ತು. ಕುಸುಗಲ್ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಅಧಿಕಾರಿಗಳ ಸಂಘದ ಶಾಲೆಯಲ್ಲಿಯೂ ಭಾರಿ ಸಂಖ್ಯೆಯಲ್ಲಿ ಜನರು ಮತದಾನ ಮಾಡಲು ಬಂದಿದ್ದರು.
ಬಿಸಿಲು ಸಹ ಹೆಚ್ಚಾಗಿರುವುದರಿಂದ ಝಳ ಏರುವ ಮೊದಲೇ ಮತದಾನ ಮಾಡಲು ಬಂದಿರುವುದಾಗಿ ಜನರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.