ADVERTISEMENT

ಲಾಡ್ ಅಕ್ಕಿಗೆ ಛಬ್ಬಿ ಕುಕ್ಕರ್‌

ನಮ್ಮ ಕ್ಷೇತ್ರ ನಮ್ಮ ಸಂಕಲ್ಪ: ಟಿಕೆಟ್‌ಗಾಗಿ ಕಾಂಗ್ರಸ್‌ನಲ್ಲಿ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 4:13 IST
Last Updated 15 ನವೆಂಬರ್ 2022, 4:13 IST
ಕಲಘಟಗಿ ತಾಲ್ಲೂಕಿನ ಹಿರೇಹೊನ್ನಿಹಳ್ಳಿಯಲ್ಲಿ ಮನೆಮನೆಗೆ ಕುಕ್ಕರ್‌ಗಳನ್ನು ಜ್ಯೋತಿ ಛಬ್ಬಿ ಇತ್ತೀಚೆಗೆ ವಿತರಿಸಿದರು
ಕಲಘಟಗಿ ತಾಲ್ಲೂಕಿನ ಹಿರೇಹೊನ್ನಿಹಳ್ಳಿಯಲ್ಲಿ ಮನೆಮನೆಗೆ ಕುಕ್ಕರ್‌ಗಳನ್ನು ಜ್ಯೋತಿ ಛಬ್ಬಿ ಇತ್ತೀಚೆಗೆ ವಿತರಿಸಿದರು   

ಕಲಘಟಗಿ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಟಿಕೆಟ್‌ಗಾಗಿ ಒಂದೆಡೆ ತೀವ್ರ ಪೈಪೋಟಿ ನಡೆದಿದೆ. ಮತ್ತೊಂದೆಡೆ ಮತದಾರರ ಓಲೈಕೆಗೆ ತೆರೆಮರೆಯ ಕಸರತ್ತು ಗರಿಗೆದರಿದೆ.

ಕೋವಿಡ್ ಸಂದರ್ಭದಲ್ಲಿ ಸಂತೋಷ್ ಲಾಡ್‌ ಅಕ್ಕಿ ವಿತರಿಸಿ ಗಮನ ಸೆಳೆದಿದ್ದರು. ಇದೀಗ ಕಾಂಗ್ರೆಸ್ ಪಕ್ಷದ ನಾಗರಾಜ ಛಬ್ಬಿ ಪರವಾಗಿ ಕ್ಷೇತ್ರದಲ್ಲಿ ಕುಕ್ಕರ್‌ ವಿತರಣೆ ನಡೆಯುತ್ತಿದೆ.

2008ರಿಂದ 2018ರವರೆಗೆ ಕಲಘಟಗಿ ಕ್ಷೇತ್ರವನ್ನು ಪ್ರತಿನಿಧಿಸಿ ಶಾಸಕರಾದ ಸಂತೋಷ ಲಾಡ್ ಅವರು, ಕ್ಷೇತ್ರಕ್ಕೆ ಭೇಟಿ ನೀಡಿಲ್ಲ ಎಂಬ ಆರೋಪಗಳು ಜನರಿಂದ ಕೇಳಿ ಬಂದಿದ್ದವು. ಹೀಗಾಗಿ 2018ರ ಚುನಾವಣೆಯಲ್ಲಿ ಬಿಜೆಪಿಯ ಸಿ.ಎಂ.ನಿಂಬಣ್ಣವರ ಅವರನ್ನು ಕ್ಷೇತ್ರದ ಮತದಾರರು ಬೆಂಬಲಿಸಿದರು.

ADVERTISEMENT

ಇದೀಗ ಚುಣಾವಣಾ ಅಖಾಡ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ ಪಕ್ಷದಲ್ಲೇ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಲಾಡ್ ಅವರು ಕ್ಷೇತ್ರದಲ್ಲಿ ಅಕ್ಕಿ ವಿತರಣೆಯ ಜತೆಗೆ, ಕೋವಿಡ್‌ನಲ್ಲಿ ದುಡಿದ ಆಶಾ ಕಾರ್ಯಕರ್ತೆಯರಿಗೆ ಬೃಹತ್ ಸನ್ಮಾನ ಸಮಾರಂಭ, ದೇವಿಯರ ಜಾತ್ರೆಯಲ್ಲಿ ಮಹಿಳೆಯರಿಗೆ ಸೀರೆ, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ 9 ಕಿ.ಮೀ. ಉದ್ದದ ರಾಷ್ಟ್ರಧ್ವಜ ಮೆರವಣಿಗೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಕ್ಷೇತ್ರದ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಆ ಮೂಲಕ ವಿಧಾನಸಭೆಗೆ ಕ್ಷೇತ್ರದಿಂದ ಮರು ಆಯ್ಕೆಗೆ ಮತದಾರರ ಓಲೈಕೆ ನಡೆಸುತ್ತಿದ್ದಾರೆ ಎಂದು ಕ್ಷೇತ್ರದ ಜನರು ಹೇಳುತ್ತಿದ್ದಾರೆ.

ಕಲಘಟಗಿ ಕ್ಷೇತ್ರ ನನಗೆ ರಾಜಕೀಯ ಪುನರ ಜನ್ಮ ನೀಡಿದ ಕ್ಷೇತ್ರವಾಗಿದ್ದು ನಾನು 2023 ರ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಜನರಿಗೆ ಹೇಳುತ್ತಲೇ ಬಂದಿದ್ದಾರೆ.ಲಾಡ್ ಅವರನ್ನು ಸರಿಸಿ ಟಿಕೆಟ್ ಗಿಟ್ಟಿಸಿಕೊಳ್ಳಲು ಛಬ್ಬಿ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ.

ಛಬ್ಬಿ ಅವರ ಪರ ಅವರ ಬೆಂಬಲಿಗರು ತಾಲ್ಲೂಕಿನಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಜನರಿಗೆ ಕುಕ್ಕರ್ ವಿತರಣೆ ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಅವರ ಪತ್ನಿ ಜ್ಯೋತಿ ಛಬ್ಬಿ ಅವರು ಇತ್ತೀಚೆಗೆ ಚಾಲನೆ ನೀಡಿದರು. ‘ನಮ್ಮ ಕ್ಷೇತ್ರ ನಮ್ಮ ಸಂಕಲ್ಪ’ ಎಂಬ ಕಾರ್ಯಕ್ರಮಗಳನ್ನು ಕ್ಷೇತ್ರದ ಅಲ್ಲಲ್ಲಿ ಆಯೋಜಿಸಿ ಕುಕ್ಕರ್ ವಿತರಿಸಲಾಗುತ್ತಿದೆ.

‘ಮೂರು ಬಾರಿ ಟಿಕೆಟ್ ವಂಚಿತರಾದ ಪತಿಗೆ ಈ ಬಾರಿ ಟಿಕೆಟ್ ಸಿಗುವ ಭರವಸೆ ಇದೆ’ ಎಂದು ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಸ್ವಪಕ್ಷದಲ್ಲೇ ಟಿಕೆಟ್‌ ಪೈಪೋಟಿಯನ್ನು ಪುಷ್ಟೀಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.