ಹುಬ್ಬಳ್ಳಿ: ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿಗಳನ್ನು ತೆರೆಯುವ ತೀರ್ಮಾನವನ್ನು ಸರ್ಕಾರ ಈ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಒತ್ತಾಯಿಸಿದ್ದಾರೆ. ಅಂಗನವಾಡಿಯಲ್ಲೇ ಎಲ್ಕೆಜಿ– ಯುಕೆಜಿ ಆರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸರ್ಕಾರದ ಕ್ರಮವನ್ನು ವಿರೋಧಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಹಶೀಲ್ದಾರ್ಗೆ ಮೂಲಕ ಮಂಗಳವಾರ ಮನವಿ ಸಲ್ಲಿಸಿದರು. ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಆಯ್ದ 4,100 ಸರ್ಕಾರಿ ಪ್ರಾಥಮಿಕ ಶಾಲೆಗಳ ಆವರಣಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಇಲ್ಲಿನ ಫಲಿತಾಂಶ– ಪರಿಣಾಮ ನೋಡಿಕೊಂಡು ಇತರ ಶಾಲೆಗಳಿಗೂ ವಿಸ್ತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸರ್ಕಾರ ತನ್ನದೇ ಒಂದು ಸಂಸ್ಥೆಯನ್ನು ಬಲಪಡಿಸಲು ಇನ್ನೊಂದನ್ನು ದುರ್ಬಲಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ಅವರು ಹೇಳಿದರು.
ಅಂಗನವಾಡಿಯಲ್ಲೇ ಎಲ್ಕೆಜಿ– ಯುಕೆಜಿ ಪ್ರಾರಂಭಿಸಿ, ಅಂಗನವಾಡಿ ನೌಕರರಿಗೆ ಈ ಕೆಲಸವನ್ನು ಅಧಿಕೃತವಾಗಿ ವಹಿಸಿ. ಈಗ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗಿರುವ ಕೌಶಲ ಮತ್ತಷ್ಟು ವೃದ್ಧಿಸಲು ಸೂಕ್ತ ತರಬೇತಿ ನೀಡಿ. ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಿ, ಶಾಲೆಗಳ ಮಾದರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಸಬೇಕು. ಇದಕ್ಕೆ ಕೊಡಬೇಕಾದ ಹಣಕಾಸು ಸಹಾಯವನ್ನು, ಮೂಲಸೌಕರ್ಯವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದೇ ವಿಷಯವನ್ನಿಟ್ಟುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮೇ30ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಅಂಗನವಾಡಿ ನೌಕರರ ಸಂಘದ ಮುಖಂಡರಾದ ಮಾರುತಿ ಚಿಟಗಿ, ಚನ್ನಮ್ಮ ಹೆಬ್ಬಳ್ಳಿ, ರಜನಿ ಪಾಟೀಲ, ಅಕ್ಕಮ್ಮ ಕಬ್ಬೇರ, ಬಸಮ್ಮ ಕಳಸದ, ಕಲಾವತಿ ಪೀರಗಣ್ಣವರ, ಅಕ್ಕಮ್ಮ ಅಂಗಡಿ ಮುಂತಾದವರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.