ಹುಬ್ಬಳ್ಳಿ: ಮಳೆಗಾಲದ ವೇಳೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಮಹಾನಗರ ಪಾಲಿಕೆ ಒಂದು ತಿಂಗಳಿನಿಂದ ಅವಳಿ ನಗರದಲ್ಲಿ ಪ್ರಮುಖ ನಾಲೆಗಳನ್ನು ಸ್ವಚ್ಛಗೊಳಿಸುವ ಕೆಲಸ ಆರಂಭಿಸಿದ್ದು, ಜೂನ್ 15ರ ವೇಳೆಗೆ ಈ ಕಾರ್ಯ ಪೂರ್ಣಗೊಳಿಸಲು ನಿರ್ಧರಿಸಿದೆ.
ಹಿಂದಿನ ವರ್ಷ ವಿಪರೀತ ಮಳೆ ಸುರಿದ ಕಾರಣ ಹೂಳು ತುಂಬಿದ್ದ ನಾಲೆಗಳಿಂದ ಬಹಳಷ್ಟು ಸಮಸ್ಯೆಯಾಗಿತ್ತು. ಉಣಕಲ್ ಕೆರೆಯಿಂದ ಗಬ್ಬೂರು ಕ್ರಾಸ್ ತನಕದ ಸುಮಾರು ಎಂಟು ಕಿ.ಮೀ ವ್ಯಾಪ್ತಿಯ ಮಾರ್ಗದಲ್ಲಿ ಹರಿದಿದ್ದ ನೀರು ಅಲ್ಲಲ್ಲಿ ಮನೆಗಳಿಗೆ ನುಗ್ಗಿ ಅಪಾರ ಹಾನಿ ಮಾಡಿತ್ತು.ಲಿಂಗರಾಜ ನಗರ, ಬನಶಂಕರಿ ಬಡಾವಣೆ, ಸಿದ್ದೇಶ್ವರ ಪಾರ್ಕ್, ಎಸ್.ಎಂ. ಕೃಷ್ಣ ನಗರ, ಕರ್ಕಿಹಳ್ಳದ ಸಮೀಪದಲ್ಲಿ ವಾಸವಾಗಿರುವ ಕುಟುಂಬಗಳಿಗೂ ಸಾಕಷ್ಟ ತಂದೊಡ್ಡಿತ್ತು. ಆದ್ದರಿಂದ ಪಾಲಿಕೆ ಮಳೆಗಾಲಕ್ಕೂ ಮೊದಲೇ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದೆ.
ಮೂರು ಹಿಟಾಚಿ ಯಂತ್ರಗಳು ಸ್ವಚ್ಛಗೊಳಿಸುವ ಕಾರ್ಯವನ್ನು ನಡೆಸುತ್ತಿವೆ. ಈ ಕಸವನ್ನು ಬೇರೆಡೆಗೆ ಸಾಗಿಸುವ ಕೆಲಸವನ್ನು ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಮಾಡುತ್ತಿದ್ದಾರೆ.
ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ‘ಹೋದ ವರ್ಷ ಮಳೆಗಾಲದ ಸಮಯದಲ್ಲಿ ಎಲ್ಲಿ ಹೆಚ್ಚು ಸಮಸ್ಯೆಯಾಗಿತ್ತು ಅಲ್ಲಿ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತಿದೆ. ವಲಯ ಐದರಲ್ಲಿ ಕಾರ್ಯ ಮುಗಿಯುವ ಹಂತಕ್ಕೆ ಬಂದಿದ್ದು, ಪ್ರತಿ ವಲಯಕ್ಕೂ ಎಂಜಿನಿಯರ್ಗಳನ್ನೇ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಮಳೆಗಾಲದಲ್ಲಿ ಸಮಸ್ಯೆಯಾಗಬಾರದು ಎನ್ನುವ ಒಂದು ತಿಂಗಳ ಹಿಂದೆಯೇ ಸ್ವಚ್ಛತಾ ಕಾರ್ಯ ಆರಂಭಿಸಿದ್ದೇವೆ. 25 ದಿನಗಳಲ್ಲಿ ಕೆಲಸ ಮುಗಿಸುವ ಗುರಿ ಹೊಂದಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.