ADVERTISEMENT

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ: ನೀರಸಾಗರ ಗ್ರಾಮದಲ್ಲಿ ಜಿಲ್ಲಾಧಿಕಾರಿ ಭಾಗಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 5:20 IST
Last Updated 20 ನವೆಂಬರ್ 2022, 5:20 IST
ಕಲಘಟಗಿಯ ನೀರಸಾಗರ ಗ್ರಾಮದಲ್ಲಿ ಫಲಾನುಭವಿಗಳಿಗೆ ಸೌಲಭ್ಯದ ಆದೇಶ ಪ್ರತಿಯನ್ನು ಶಾಸಕ ಸಿ.ಎಂ ನಿಂಬಣ್ಣವರ ಮತ್ತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವಿತರಿಸಿದರು
ಕಲಘಟಗಿಯ ನೀರಸಾಗರ ಗ್ರಾಮದಲ್ಲಿ ಫಲಾನುಭವಿಗಳಿಗೆ ಸೌಲಭ್ಯದ ಆದೇಶ ಪ್ರತಿಯನ್ನು ಶಾಸಕ ಸಿ.ಎಂ ನಿಂಬಣ್ಣವರ ಮತ್ತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವಿತರಿಸಿದರು   

ಕಲಘಟಗಿ:ನೀರಸಾಗರ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳಿಗೆ ‍ಪರಿಹಾರ ಸೂಚಿಸಲಾಯಿತು.

ಪಿಆರ್‌ಇಡಿ ಇಲಾಖೆಯಿಂದ ನೀರಸಾಗರದಿಂದ- ಜಿ.ಬಸವನಕೊಪ್ಪ ಗ್ರಾಮಕ್ಕೆ ರಸ್ತೆ ನಿರ್ಮಿಸಲಾಗಿದ್ದು, ಕೆಲವು ಭಾಗದಲ್ಲಿ ರೈತರು ಒತ್ತುವರಿ ಮಾಡಿ ಸಿಂಗಲ್ ರಸ್ತೆ ಮಾಡಿದ್ದಾರೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಆಗಿದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮನವಿ ಪರಿಶೀಲಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ರಸ್ತೆ ಅಳತೆ ಮತ್ತು ಸಮೀಕ್ಷೆ ಮಾಡಲು ಭೂದಾಖಲೆ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ ಎ.ಪಿ. ಅವರಿಗೆ ಸೂಚನೆ ನೀಡಿದರು. ಒತ್ತುವರಿದಾರರು ಸ್ವಯಂ ಪ್ರೇರಣೆ
ಯಿಂದ ತೆರವುಗೊಳಿಸದಿದ್ದಲ್ಲಿ ಅವರ ವಿರುದ್ಧ ತಹಶೀಲ್ದಾರ್‌, ತಾಲ್ಲೂಕು ಪಂಚಾಯ್ತಿ ಇಒ ಮತ್ತು ಪಿಆರ್‌ಇಡಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ADVERTISEMENT

ನೀರಸಾಗರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ನಿರ್ಮಿಸಿರುವ ನೂತನ ಕಟ್ಟಡವನ್ನು ಶಿಶು ಅಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಿದರು. ಗ್ರಾಮಸ್ಥರ ಬಹುದಿನಗಳ ಬೇಡಿಕೆ ಗ್ರಾಮ ಸಂಪರ್ಕ ರಸ್ತೆ ನಿರ್ಮಾಣ ಮತ್ತು ಗ್ರಾಮಕ್ಕೆ ಸ್ಮಶಾನ ಭೂಮಿ ಮಂಜೂರಾತಿಗೆ ಸ್ಪಂದಿಸಿದರು.

ಜಿ.ಬಸವನಕೊಪ್ಪದಿಂದ ಬರ್ಶಿ
ಕೊಪ್ಪ ಗ್ರಾಮದವರೆಗೆ ಸುಮಾರು 3 ಕಿ.ಮೀ. ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿ ಮಂಜೂರಾಗಿ
ದ್ದರೂ ಒತ್ತುವರಿ ಹಾಗೂ ತಕರಾರಿನಿಂದ ನನೆಗುದಿಗೆ ಬಿದ್ದಿತ್ತು. ಗ್ರಾಮಸ್ಥರ ಮನವಿ ಮೇರೆಗೆ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿ
ಗಳು ಹಾಗೂ ರೈತರನ್ನು ಕರೆಯಿಸಿ ಮನ
ವರಿಕೆ ಮಾಡಿ ಎಲ್ಲರ ಒಪ್ಪಿಗೆ ಪಡೆದು ಜಿಲ್ಲಾಧಿಕಾರಿಯೇ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿದರು.

ಜಿಲ್ಲಾಧಿಕಾರಿಗಳು ಗ್ರಾಮದ ಸರ್ವೆ ಸಂಖ್ಯೆ 78/1ರಲ್ಲಿ ಎರಡು ಎಕರೆ ಮಂಜೂರು ಮಾಡಿದ ಭೂಮಿ ದಾಖಲೆ ಪತ್ರವನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ನೀಡಿದರು. ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸೌಲಭ್ಯವನ್ನು ಶಾಸಕ ಸಿ.ಎಂ. ನಿಂಬಣ್ಣವರ ಮತ್ತು ಜಿಲ್ಲಾಧಿಕಾರಿಗಳು ವಿತರಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಸುರೇಶ ಇಟ್ನಾಳ, ತಹಶೀಲ್ದಾರ್‌ ಯಲ್ಲಪ್ಪ ಗೊಣೆಣ್ಣವರ, ಇಒ ಭಾಗ್ಯಶ್ರೀ ಜಾಗೀರದಾರ, ತಾಲ್ಲೂಕು ಕೃಷಿ ನಿರ್ದೇಶಕ ಎನ್.ಎಫ್. ಕಟ್ಟೆಗೌಡರ, ಸಮಾಜ ಕಲ್ಯಾಣ ಅಧಿಕಾರಿ ಎ.ಜೆ. ಯೋಗಪ್ಪನವರ, ಬಿಇಒ ಉಮಾದೇವಿ ಬಸಾಪುರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಮಾದನಭಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.