ADVERTISEMENT

ಒಂದು ತಿಂಗಳಲ್ಲಿ ಬಿಒಬಿಯಿಂದ ಸಂಪೂರ್ಣ ಸೌಲಭ್ಯ: ಶ್ರೀನಿವಾಸ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 13:05 IST
Last Updated 1 ಏಪ್ರಿಲ್ 2019, 13:05 IST
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ ಆಫ್‌ ಬರೋಡಾದ ವಿಭಾಗೀಯ ವ್ಯವಸ್ಥಾಪಕ ಆರ್‌. ಶ್ರೀನಿವಾಸ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ ಆಫ್‌ ಬರೋಡಾದ ವಿಭಾಗೀಯ ವ್ಯವಸ್ಥಾಪಕ ಆರ್‌. ಶ್ರೀನಿವಾಸ ಮಾತನಾಡಿದರು   

ಹುಬ್ಬಳ್ಳಿ: ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳು ಸೋಮವಾರದಿಂದ ಬ್ಯಾಂಕ್‌ ಆಫ್‌ ಬರೋಡಾ ಜೊತೆ ವಿಲೀನವಾಗಿದ್ದು, ಒಂದು ತಿಂಗಳಲ್ಲಿ ಗ್ರಾಹಕರಿಗೆ ಬ್ಯಾಂಕ್‌ ಆಫ್‌ ಬರೋಡಾದಿಂದಲೇ (ಬಿಒಬಿ) ಸಂಪೂರ್ಣ ಸೌಲಭ್ಯಗಳು ಲಭಿಸಲಿವೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್‌ ಆಫ್‌ ಬರೋಡಾದ ವಿಭಾಗೀಯ ವ್ಯವಸ್ಥಾಪಕ ಆರ್‌. ಶ್ರೀನಿವಾಸ ‘ಬ್ಯಾಂಕ್‌ಗಳು ವೀಲಿನವಾಗಿರುವುದರಿಂದ ಸೋಮವಾರ ಬ್ಯಾಂಕಿಂಗ್‌ ವಲಯದಲ್ಲಿ ನಮಗೆ ಐತಿಹಾಸಿಕ ದಿನ. ಇದರಿಂದ ನಮ್ಮ ಬ್ಯಾಂಕ್‌ ಸಾರ್ವಜನಿಕ ವಲಯದ ಭಾರತದ ಎರಡನೇ ಅತಿದೊಡ್ಡ ಬ್ಯಾಂಕ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದರು.

‘ವಿಜಯಾ ಮತ್ತು ದೇನಾ ಬ್ಯಾಂಕುಗಳು ಒಂದು ತಿಂಗಳ ತನಕ ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಒಂದೇ ಕಟ್ಟದಲ್ಲಿರುವ ಬ್ಯಾಂಕ್‌ಗಳನ್ನು ಮುಂದೆ ವಿಲೀನ ಮಾಡಲಾಗುತ್ತದೆ. ಎರಡೂ ಬ್ಯಾಂಕ್‌ಗಳ ಗ್ರಾಹಕರು ಮೊದಲು ಹೊಂದಿದ್ದ ಖಾತೆ ಸಂಖ್ಯೆ, ಪಾಸ್‌ಬುಕ್‌, ಕ್ರೆಡಿಟ್‌ ಕಾರ್ಡ್‌, ಎಟಿಎಂ ಕಾರ್ಡ್‌ಗಳೇ ಮುಂದುವರಿಯುತ್ತವೆ. ಬ್ಯಾಂಕ್‌ಗಳ ವಿಲೀನದಿಂದ ದೇಶದ 12 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸುಲಭವಾಗಿ ಸೌಲಭ್ಯ ಲಭಿಸುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ADVERTISEMENT

ಅವಳಿನಗರದಲ್ಲಿ ದೇನಾ ಬ್ಯಾಂಕ್‌ನ ಎರಡು ಶಾಖೆಗಳು, ಬ್ಯಾಂಕ್‌ ಆಫ್‌ ಬರೋಡಾದ ಮೂರು ಶಾಖೆಗಳು ಇವೆ. ಹುಬ್ಬಳ್ಳಿ ವಿಭಾಗದಲ್ಲಿ ವಿಜಯಾ ಬ್ಯಾಂಕ್‌ 19 ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿದ್ದು, ಇದರಲ್ಲಿ 51 ಶಾಖೆಗಳಿವೆ.

‘ವೀಲಿನದ ಬಳಿಕ ಬ್ಯಾಂಕ್‌ ಆಫ್‌ ಬರೋಡಾದಲ್ಲಿ ದೇಶದಲ್ಲಿ 9,500ಕ್ಕೂ ಹೆಚ್ಚು ಶಾಖೆಗಳು, 13,400ಕ್ಕೂ ಹೆಚ್ಚು ಎಟಿಎಂ, 85 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಾರೆ. ಇದರಿಂದ ಗ್ರಾಹಕರಿಗೆ ತ್ವರಿತವಾಗಿ ಸೇವೆ ನೀಡಲು ಸಾಧ್ಯವಾಗುತ್ತದೆ. ಬ್ಯಾಂಕ್‌ ಉದ್ಯೋಗಿಗಳಿಗೂ ಉತ್ತಮ ಸೌಲಭ್ಯ ಲಭಿಸುತ್ತವೆ’ ಎಂದು ತಿಳಿಸಿದರು.

ವಿಜಯಾ ಬ್ಯಾಂಕ್‌ನ ವಿಭಾಗೀಯ ವ್ಯವಸ್ಥಾಪಕ ಬ್ಯಾಪ್ಟಿಸ್ಟ್‌ ಲೊಬೊ ಮತ್ತು ದೇನಾ ಬ್ಯಾಂಕ್‌ನ ಮ್ಯಾನೇಜರ್‌ ಕೆ. ಗುರುನಾಥರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.