ADVERTISEMENT

ಕಾಂಗ್ರೆಸ್‌ನಿಂದ 2 ಕಿ.ಮೀ ತ್ರಿವರ್ಣ ಧ್ವಜ ಮೆರವಣಿಗೆ

ಕೋವಿಡ್ ನಿಯಮ ಉಲ್ಲಂಘನೆ– ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 20:47 IST
Last Updated 15 ಆಗಸ್ಟ್ 2021, 20:47 IST
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಲಘಟಗಿ ಪಟ್ಟಣದಲ್ಲಿ ಕಾಂಗ್ರೆಸ್‌ ‍ಪಕ್ಷದ ವತಿಯಿಂದ ಭಾನುವಾರ ಆಯೋಜಿಸಿದ್ದ ಮೆರವಣಿಗೆಯಲ್ಲಿ ಸಹಸ್ರಾರು ಜನರು ಪಾಲ್ಗೊಂಡಿದ್ದರು
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಲಘಟಗಿ ಪಟ್ಟಣದಲ್ಲಿ ಕಾಂಗ್ರೆಸ್‌ ‍ಪಕ್ಷದ ವತಿಯಿಂದ ಭಾನುವಾರ ಆಯೋಜಿಸಿದ್ದ ಮೆರವಣಿಗೆಯಲ್ಲಿ ಸಹಸ್ರಾರು ಜನರು ಪಾಲ್ಗೊಂಡಿದ್ದರು   

ಕಲಘಟಗಿ (ಧಾರವಾಡ ಜಿಲ್ಲೆ): ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಪಟ್ಟಣದಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಭಾನುವಾರ ನಡೆದ ತ್ರಿವರ್ಣ ಧ್ವಜ ಮೆರವಣಿಗೆಯಲ್ಲಿ ಸಾವಿರಾರು ಜನರು ಅಂತರ ಮರೆತು ಪಾಲ್ಗೊಂಡಿದ್ದರು.

ಸುಮಾರು ಎರಡು ಕಿ.ಮೀ ಉದ್ದಕ್ಕೆ ಸಾಗಿದ ಈ ಮೆರವಣಿಗೆಯು ಕಲಘಟಗಿ ಹೊರವಲದ ತಡಸ ಕ್ರಾಸ್ ದಿಂದ ಪಟ್ಟಣದ ತಹಶೀಲ್ದಾರ್‌ ಕಚೇರಿಯವರೆಗೆ ನಡೆಯಿತು.

ಮೆರವಣಿಗೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕೋವಿಡ್ ನಿಯಮ ಉಲ್ಲಂಘನೆ ಅನ್ವಯ 14 ಜನ ಕಾಂಗ್ರೆಸ್‌ ಮುಖಂಡರ ಮೇಲೆಸಿ‍ಪಿಐ ಪ್ರಭು ಸೂರಿನ್‌, ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಕೋವಿಡ್ ಹಾವಳಿ ಇದ್ದರೂ ಅದನ್ನು ಲೆಕ್ಕಿಸದೆ ಕಲಘಟಗಿ ಹಾಗೂ ಅಳ್ನಾವರ ಭಾಗದಿಂದ 10 ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಸೇರಿದ್ದರು. ಮಾಸ್ಕ್‌, ಅಂತರ ಕಾಪಾಡಿಕೊಳ್ಳದ ಈ ಮೆರವಣಿಗೆ ಹಾಗೂ ಈ ಬಗ್ಗೆ ತಾಲ್ಲೂಕು ಆಡಳಿತದ ನಿರ್ಲಕ್ಷ್ಯದ ವಿರುದ್ಧ ಜನಸಾಮಾನ್ಯರು ಆಕ್ರೋಶ
ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯೋತ್ಸವದ ದಿನ ತ್ರಿವರ್ಣ ಧ್ವಜದ ಮೆರವಣಿಗೆಯು ಪಟ್ಟಣದಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷದಿಂದ ಹಲವು ದಿನಗಳ ಮುಂಚಿತವಾಗಿಯೇ ಎಲ್ಲೆಡೆ ಪ್ರಚಾರ ಮಾಡಲಾಗಿತ್ತಾದರೂ ಈ ಬಗ್ಗೆ ತಾಲ್ಲೂಕು ಆಡಳಿತ ಗಮನ ಹರಿಸದೆ ನಿರ್ಲಕ್ಷ್ಯ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

‘ಈ ಮೆರವಣಿಗೆಗೆ ತಾಲ್ಲೂಕು ಆಡಳಿತ ಅನುಮತಿ ನೀಡರಲಿಲ್ಲ, ಮೆರವಣಿಗೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ತಹಶೀಲ್ದಾರ್‌ ಯಲ್ಲಪ್ಪ ಗೊಣ್ಣೆಣ್ಣವರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.