ADVERTISEMENT

ಉಪಚುನಾವಣೆಗಳಲ್ಲಿ ಜೆಡಿಎಸ್‌ ಸ್ಪರ್ಧಿಸಲಿಕ್ಕಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 5:12 IST
Last Updated 11 ಫೆಬ್ರುವರಿ 2021, 5:12 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಶಕ್ತಿ ಇಲ್ಲ. ಇಲ್ಲಿ ಬಿಜೆಪಿಗೆ ಅಲ್ವ–ಸ್ವಲ್ಪ ಶಕ್ತಿ ಇರುವುದು. ಹಾಗಾಗಿ ಇಲ್ಲಿನ ಉಪಚುನಾವಣೆಗಳಲ್ಲಿ ಜೆಡಿಎಸ್‌ ಸ್ಪರ್ಧಿಸಲಿಕ್ಕಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆ, ಬಸವ ಕಲ್ಯಾಣ, ಮಸ್ಕಿ ಉಪಚುನಾವಣೆ ಎದುರಿಸಲು ಕಾಂಗ್ರೆಸ್‌ ಸನ್ನದ್ಧವಾಗಿದೆ. ಚುನಾವಣೆ ಘೋಷಿಸುತ್ತಿದ್ದಂತೆಯೇ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುವುದು ಎಂದರು.

ಕಾಂಗ್ರೆಸ್‌ ಯಾವತ್ತೂ ಅಹಿಂದ ಪರವಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದೆ. ಬಿಜೆಪಿ, ಅಹಿಂದ ಪರವಾಗಿಲ್ಲ. ಆ ಪಕ್ಷದ ಇತಿಹಾಸ ನೋಡಿದರೆ ಗೊತ್ತಾಗುತ್ತದೆ ಎಂದರು.

ADVERTISEMENT

ರಾಜಕೀಯಕ್ಕಾಗಿ ಹೋರಾಟ ಮಾಡಲ್ಲ: ರಾಜಕೀಯ ಅಸ್ತಿತ್ವಕ್ಕಾಗಿ ಮೀಸಲಾತಿ ಹೋರಾಟ ಮಾಡುವುದಿಲ್ಲ. ಕುಲಶಾಸ್ತ್ರ ಅಧ್ಯಯನದ ವರದಿ ಬಂದಿಲ್ಲ. ಅದು ಬಂದ ಮೇಲಷ್ಟೇ ಕುರುಬರನ್ನು ಎಸ್‌ಟಿಗೆ ಸೇರ್ಪಡೆ ಮಾಡಬಹುದು. ಎಸ್‌ಟಿಗೆ ಸೇರಿಸಬಾರದು ಎಂದು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ಧಿ ಮಾಡಿಲ್ಲ ಎಂಬ ಸಚಿವ ಕೆ.ಎಸ್‌. ಈಶ್ವರಪ್ಪ ಆರೋಪದ ಬಗೆಗೆ ಉತ್ತರಿಸಿದ ಅವರು, ಈಶ್ವರಪ್ಪ ಯಾರ್ರಿ?, ಈಶ್ವರಪ್ಪಗೆ ಲೆಕ್ಕ ಒಪ್ಪಿಸಬೇಕಾ? ಅವರಿಂದ ಪ್ರಮಾಣಪತ್ರ ಪಡೆಯಬೇಕಾ? ಜನರಿಗೆ ಲೆಕ್ಕ ಒಪ್ಪಿಸುತ್ತೇವೆ. ಪ್ರಮಾಣಪತ್ರವನ್ನೂ ಜನರೇ ನೀಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.