ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದು ನಿಯಂತ್ರಣದಲ್ಲಿದೆ. ಜನ ಅನಗತ್ಯವಾಗಿ ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಕಿಮ್ಸ್ನಲ್ಲಿ ಶುಕ್ರವಾರ ಕೋವಿಡ್ 19 ರೋಗಿಗಳ ಆರೈಕೆ ಮಾಡಿದ ಸ್ಟಾಫ್ ನರ್ಸ್ಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ‘ಸೋಂಕಿತರ ಚಿಕಿತ್ಸೆಗಾಗಿ 500 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಅನುಭವಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಭಯಪಡಬೇಕಿಲ್ಲ. ಸದ್ಯದ ತಂಪನೆಯ ಹವಾಮಾನದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಜನ ಅನಗತ್ಯವಾಗಿ ಓಡಾಡುವುದನ್ನು ಕಡಿಮೆ ಮಾಡಬೇಕು’ ಎಂದರು.
’ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ತಪಾಸಣಾ ಪರೀಕ್ಷೆಗಳನ್ನು ಮಾಡುತ್ತಿರುವುದರಿಂದ ಹೆಚ್ಚು ಪ್ರಕರಣಗಳನ್ನು ಬೆಳಕಿಗೆ ಬರುತ್ತಿವೆ. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಿಬ್ಬಂದಿಗೆ ಸೋಂಕು ತಗುಲಿದೆ ಎಂದು ಅವರನ್ನು ತಾರತಮ್ಯದಿಂದ ನೋಡದೆ, ವಾರಿಯರ್ಸ್ಗಳನ್ನು ಗೌರವದಿಂದ ಕಾಣಬೇಕು. ಇದೇ ಉದ್ದೇಶದಿಂದ ಜಿಲ್ಲಾಡಳಿತ ನರ್ಸ್ಗಳನ್ನು ಸನ್ಮಾನಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆ’ ಎಂದರು.
ಸ್ಟಾಫ್ ನರ್ಸ್ಗಳಾದ ಮಂಜುಳಾ ಕೊತರೆ, ಕಮಲಾ, ಬಾಲಕೃಷ್ಣಾ, ಗಂಗಮ್ಮ ಬಳ್ಳಾರಿ, ಶ್ವೇತಾ ಬಣ್ಣಾ, ಆಶಾ ಎಸ್.ಬಿ., ಜ್ಯೊತಿ ಡಿ.ಸಿ, ರಾಜೇಶ್ವರಿ ಎಚ್ ಸೇರಿದಂತೆ ಒಟ್ಟು 11 ಸಿಬ್ಬಂದಿಗೆ ಗೌರವ ಸಲ್ಲಿಸಲಾಯಿತು.
ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಹುಬ್ಬಳ್ಳಿ ಶಹರ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಕಿಮ್ಸ್ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ವೈದ್ಯಕೀಯ ಅಧೀಕ್ಷಕ ಅರುಣ ಕುಮಾರ್, ಎಂ.ಎಸ್., ಡಾ ದ್ಯಾಬೇರಿ, ಲಕ್ಷ್ಮೀಕಾಂತ ಮುಲ್ಕಿಪಾಟೀಲ, ವಾರ್ತಾ ಇಲಾಖೆ ಅಧೀಕ್ಷಕ ವಿನೋದ್ ಕುಮಾರ್ಡಿ. ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.