ADVERTISEMENT

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸಿ; ಮುಖ್ಯಮಂತ್ರಿಗೆ ಪಾಟೀಲ ಪತ್ರ

​ಪ್ರಜಾವಾಣಿ ವಾರ್ತೆ
Published 14 ಮೇ 2022, 14:11 IST
Last Updated 14 ಮೇ 2022, 14:11 IST
ಎಚ್‌.ಕೆ. ಪಾಟೀಲ
ಎಚ್‌.ಕೆ. ಪಾಟೀಲ   

ಹುಬ್ಬಳ್ಳಿ: ಅಭಿವೃದ್ಧಿಯ ದೃಷ್ಟಿಯಿಂದ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸಬೇಕು ಎಂದು ಗದಗ ಶಾಸಕ ಎಚ್‌.ಕೆ. ಪಾಟೀಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರಬರೆದು ಆಗ್ರಹಿಸಿದ್ದಾರೆ.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ರಚನೆಯಾಗಿ ಆರು ದಶಕಗಳಾಗಿವೆ. ಈ ಅವಧಿಯಲ್ಲಿ ಅವಳಿ ನಗರಗಳು ಸಾಕಷ್ಟು ಬೆಳೆದಿದ್ದು, ಜನಸಂಖ್ಯೆಯೂ ಹೆಚ್ಚಾಗಿದೆ. ಧಾರವಾಡ ವಿವಿಧ ತರಬೇತಿಗಳ ವಿದ್ಯಾಕೇಂದ್ರವಾಗಿದೆ. ಎರಡೂ ನಗರಗಳಿಗೆ ಸಮರ್ಪಕವಾಗಿ ನಾಗರಿಕ ಸೌಲಭ್ಯಗಳನ್ನು ಒದಗಿಸಲು ಕಷ್ಟಸಾಧ್ಯವಾಗುತ್ತಿದೆ. ಆದ್ದರಿಂದ ಧಾರವಾಡ ಪ್ರತ್ಯೇಕ ಪಾಲಿಕೆ ರಚನೆ ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹುಬ್ಬಳ್ಳಿ–ಧಾರವಾಡ ಪಾಲಿಕೆ ಜನಸಂಖ್ಯೆ ಹಾಗೂ ವಿಸ್ತಾರದಲ್ಲಿ ದೊಡ್ಡದಿದ್ದರೂ ಬೇರೆ ಪಾಲಿಕೆಗಳಿಗೆ ಸಿಕ್ಕಷ್ಟೇ ಅನುದಾನ ಸಿಗುತ್ತಿದೆ. ಪ್ರತ್ಯೇಕ ಪಾಲಿಕೆಯಾದರೆ ಬೇರೆ ಅನುದಾನ ಲಭಿಸಿ ನಗರಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಈಗಿನ ಮಹಾನಗರ ಪಾಲಿಕೆಗೆ ಸಿಗುತ್ತಿರುವ ಅನುದಾನದಲ್ಲಿ ಶೇ 15ರಿಂದ 20ರಷ್ಟು ಮಾತ್ರ ಧಾರವಾಡಕ್ಕೆ ಲಭಿಸುತ್ತಿದೆ ಎಂದಿದ್ದಾರೆ.

ADVERTISEMENT

1976ರ ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ ಪ್ರಕಾರ ಪ್ರತ್ಯೇಕ ಪಾಲಿಕೆಗಳ ರಚನೆಗೆ ಇರಬೇಕಾದ ಎಲ್ಲಾ ಅರ್ಹತೆಗಳು ಧಾರವಾಡಕ್ಕೆ ಇವೆ. ರಾಜ್ಯದ ಇತರ ಪಾಲಿಕೆಗಳು ಹಾಗೂ ಇಲ್ಲಿನ ಪಾಲಿಕೆಗೆ ಲಭಿಸಿದ ಅನುದಾನದ ವಿವರ, ಜನಸಂಖ್ಯೆ, ವಿಸ್ತೀರ್ಣ ಹಾಗೂ ಕರ ಆದಾಯದ ಮಾಹಿತಿ ನೋಡಿದರೆ ಧಾರವಾಡಕ್ಕೆ ಅನ್ಯಾಯವಾಗಿರುವುದು ಗೊತ್ತಾಗುತ್ತದೆ. ಆದ್ದರಿಂದ ಪ್ರತ್ಯೇಕ ಪಾಲಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.