ADVERTISEMENT

ಫಸ್ಟ್‌ ಅಕಾಡೆಮಿಗೆ ಗೆಲುವು

16 ವರ್ಷದ ಒಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 14:39 IST
Last Updated 5 ಅಕ್ಟೋಬರ್ 2021, 14:39 IST
ಹುಬ್ಬಳ್ಳಿಯಲ್ಲಿ ಸೋಮವಾರ ಆರಂಭವಾದ 16 ವರ್ಷದ ಒಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಗೆ ಕೆಎಸ್‌ಸಿಎ ಧಾರವಾಡ ವಲಯದ ಟೂರ್ನಿ ಸಮಿತಿ ಚೇರ್ಮನ್‌ ಅಲ್ತಾಫ್‌ ನವಾಜ ಕಿತ್ತೂರ ಚಾಲನೆ ನೀಡಿ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಸೋಮವಾರ ಆರಂಭವಾದ 16 ವರ್ಷದ ಒಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಗೆ ಕೆಎಸ್‌ಸಿಎ ಧಾರವಾಡ ವಲಯದ ಟೂರ್ನಿ ಸಮಿತಿ ಚೇರ್ಮನ್‌ ಅಲ್ತಾಫ್‌ ನವಾಜ ಕಿತ್ತೂರ ಚಾಲನೆ ನೀಡಿ ಮಾತನಾಡಿದರು   

ಹುಬ್ಬಳ್ಳಿ: ಅಲ್ಪ ಮೊತ್ತದ ಗುರಿಯನ್ನು ಸುಲಭವಾಗಿ ಮುಟ್ಟಿದ ಧಾರವಾಡದ ಫಸ್ಟ್‌ ಕ್ರಿಕೆಟ್‌ ಅಕಾಡೆಮಿ ತಂಡ, ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ಆಯೋಜಿಸಿರುವ 16 ವರ್ಷದ ಒಳಗಿನವರ ಅಂತರ ಕ್ಲಬ್‌ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ್ದ ಶ್ರೀದುರ್ಗಾ ಸ್ಪೋರ್ಟ್ಸ್ಸ್ ಅಕಾಡೆಮಿ 23.3 ಓವರ್‌ಗಳಲ್ಲಿ 71 ರನ್‌ ಗಳಿಸಿತ್ತು. ಈ ಗುರಿಯನ್ನು ಫಸ್ಟ್‌ ಅಕಾಡೆಮಿ 14.5 ಓವರ್‌ಗಳಲ್ಲಿ ತಲುಪಿತು.

ದಿನದ ಇನ್ನೊಂದು ಪಂದ್ಯದಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಮೊದಲು ಬ್ಯಾಟ್‌ ಮಾಡಿ 30 ಓವರ್‌ಗಳಲ್ಲಿ ಎಂಟು ವಿಕೆಟ್‌ ನಷ್ಟಕ್ಕೆ 159 ರನ್ ಗಳಿಸಿತ್ತು. ಎದುರಾಳಿ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ಇನಿಂಗ್ಸ್ ಆರಂಭವಾದ 16 ಓವರ್‌ಗಳ ವೇಳೆಗೆ ಮಳೆ ಸುರಿಯಿತು. ಇದರಿಂದಾಗಿ ನಾಲ್ಕು ಓವರ್‌ಗಳಲ್ಲಿ 40 ರನ್‌ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು. ಈ ತಂಡಕ್ಕೆ ಗುರಿ ತಲುಪಲು ಸಾಧ್ಯವಾಗಲಿಲ್ಲ.

ADVERTISEMENT

ಧಾರವಾಡದ ಎಸ್‌ಡಿಎಂ ಅಕಾಡೆಮಿ ಮೊದಲು ಬ್ಯಾಟ್‌ ಮಾಡಿ 28 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 158 ರನ್‌ ಕಲೆಹಾಕಿತ್ತು. ಈ ಗುರಿಯನ್ನು ಎದುರಾಳಿ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ 28 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು ಮುಟ್ಟಿತು. ಮತ್ತೊಂದು ಪಂದ್ಯದಲ್ಲಿ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿ 30 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 179 ರನ್‌ ಗಳಿಸಿತ್ತು. ಈ ಗುರಿಯ ಎದುರು ಪರದಾಡಿದ ಚಾಂಪಿಯನ್ಸ್‌ ನೆಟ್‌ 23 ಓವರ್‌ಗಳಲ್ಲಿ 119 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು.

ಇನ್ನಷ್ಟು ಪಂದ್ಯಗಳಲ್ಲಿ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ತಂಡ ಶ್ರೀದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ವಿರುದ್ಧ ಎಂಟು ರನ್‌ಗಳಿಂದ, ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಧಾರವಾಡದ ಕ್ರಿಕೆಟ್‌ ಕ್ಲಬ್ ಆಫ್‌ ಕರ್ನಾಟಕದ ಎದುರು 82 ರನ್‌ಗಳಿಂದ, ಹುಬ್ಬಳ್ಳಿಯ ಚೈತನ್ಯ ಸ್ಪೋರ್ಟ್ಸ್ ಫೌಂಡೇಷನ್‌ ವಿರುದ್ಧ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿ ಎಂಟು ವಿಕೆಟ್‌ಗಳಿಂದ ಮತ್ತು ಹುಬ್ಬಳ್ಳಿಯ ಸ್ಪೋರ್ಟ್ಸ್‌ ಕ್ಲಬ್‌ ಎದುರು ಚಾಂಪಿಯನ್ಸ್‌ ತಂಡ ಮೂರು ವಿಕೆಟ್‌ಗಳಿಂದ ಗೆಲುವು ಸಾಧಿಸಿದವು.

13ರಂದು ಫೈನಲ್‌: ಟೂರ್ನಿಯಲ್ಲಿ ಹತ್ತು ತಂಡಗಳು ಪಾಲ್ಗೊಂಡಿದ್ದು, ಪ್ರತಿ ಗುಂಪಿನಲ್ಲಿ ತಲಾ ಐದು ತಂಡಗಳಿವೆ. ಅ. 12ರಂದು ಸೆಮಿಫೈನಲ್‌ ಮತ್ತು 13ರಂದು ಫೈನಲ್‌ ಜರುಗಲಿದೆ.

ಉದ್ಘಾಟನೆ: ಕೆಎಸ್‌ಸಿಎ ಧಾರವಾಡ ವಲಯದ ಟೂರ್ನಿ ಸಮಿತಿ ಚೇರ್ಮನ್‌ ಅಲ್ತಾಫ್‌ ನವಾಜ ಕಿತ್ತೂರ ಟೂರ್ನಿಗೆ ಚಾಲನೆ ನೀಡಿದರು. ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ಚೇರ್ಮನ್‌ ವೀರಣ್ಣ ಸವಡಿ, ಶೀತಲ್‌ ಗೋಟಡ್ಕಿ, ಡಾ. ವಿವೇಕ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.