ADVERTISEMENT

ಎರಡು ಕಡೆ ಚಾಕು ಇರಿತ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 3:28 IST
Last Updated 4 ನವೆಂಬರ್ 2020, 3:28 IST

ಹುಬ್ಬಳ್ಳಿ: ನಗರದ ಎರಡು ಕಡೆ ಚಾಕು ಇರಿತ ಪ್ರಕರಣಗಳು ನಡೆದಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆಗಳಿಗೆ ಸಂಬಂಧಿಸಿದಂತೆ ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಟಿಪ್ಪು ನಗರದಲ್ಲಿ ಶೋಯಬ್‌ ಎನ್ನುವ ಯುವಕ ಚಾಕು ಇರಿತಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಗಾಯಾಳುವಿನಿಂದ ಮಾಹಿತಿ ಪಡೆದ ಪೊಲೀಸರು ಸಾಗರ ಲಕ್ಕುಂಡಿ ಎಂಬಾತನನ್ನು ಬಂಧಿಸಿದ್ದಾರೆ.

ಬೈಕ್‌ ನಿಧಾನವಾಗಿ ಓಡಿಸು ಎಂದು ಹೇಳಿದ್ದಕ್ಕೆ ಸಾಗರ ಮತ್ತು ಶೋಯಬ್‌ ನಡುವೆ ಮಾತಿಗೆ ಮಾತು ಬೆಳೆದು ಚಾಕು ಇರಿತ ನಡೆದಿದೆ. ಹಿಂದೆಯೂ ಇವರಿಬ್ಬರ ನಡುವೆ ಗಲಾಟೆಯಾಗಿತ್ತು. ಹಳೇ ದ್ವೇಷ ಈ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಧವ ನಗರದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ರಮೇಶ ಕಟ್ಟಿಮನಿ ಎನ್ನುವ ಯುವಕನಿಗೆ ಚಾಕು ಇರಿಯಲಾಗಿದ್ದು, ವಿನಾಯಕ ನರಗುಂದ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಟ್ಟಿಂಗ್‌: ಐಪಿಎಲ್‌ ಕ್ರಿಕೆಟ್‌ ಟೂರ್ನಿಯ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಕೇಶ್ವಾಪುರ ಪೊಲೀಸರು ಬಂಧಿಸಿ ₹1.34 ಲಕ್ಷ ನಗದು ವಶಪಡಿಸಿದ್ದಾರೆ.

ಜನತಾ ಕಾಲೊನಿ ಸರ್ಕಲ್‌ನಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರ್‌.ಸಿ. ಕಾಲೊನಿಯ ಶಿವರಾಮಕೃಷ್ಣ ನಾಚರಯ್ಯ, ರಾಜೇಂದ್ರ ಪ್ರಭುದಾಸ ಮತ್ತು ರಾಜರಾವ್‌ ಜೋಸೆಫ್‌ ಅವರನ್ನು ಬಂಧಿಸಲಾಗಿದೆ. ಎರಡು ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.