ಕಲಘಟಗಿ: ತಾಲ್ಲೂಕಿನ ದಾಸ್ತಿಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ದೆಹಲಿಯ ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್) ಕಮಿಟಿಯ ತಂಡ ಗುರುವಾರ ಭೇಟಿ ನೀಡಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಕುರಿತು ಮೌಲ್ಯಮಾಪನ ಪರಿಶೀಲಿಸಿತು.
ಡಾ. ನರೇಂದ್ರಕುಮಾರ ತನೇಜಾ, ಡಾ.ನರೇಶ ಪಟೇಲ, ಡಾ. ರಾಜೀವ ಕೇರ್ ಸದಸ್ಯರನ್ನು ಒಳಗೊಂಡ ತಂಡ ಕಾಲೇಜಿನ ವಿವಿಧ ವಿಭಾಗಗಳ ಶೈಕ್ಷಣಿಕ ಗುಣಮಟ್ಟದ ಕುರಿತು ದಾಖಲೆಗಳ ಪರಿಶೀಲನೆ ಹಾಗೂ ವಿದ್ಯಾರ್ಥಿಗಳ ವ್ಯಾಸಂಗದ ಪ್ರಗತಿಯ ಕುರಿತು ಮಾಹಿತಿ ಪಡೆಯಿತು. ಕಾಲೇಜಿನ ಅಭಿವೃದ್ಧಿ, ಶೈಕ್ಷಣಿಕ ಪ್ರಕ್ರಿಯೆಗಳು, ಫಲಿತಾಂಶ, ಬೋಧನೆ, ಕಲಿಕಾ ಸಾಮಗ್ರಿ, ಮಹಾವಿದ್ಯಾಲಯದ ಮೂಲ ಸೌಕರ್ಯ, ಕಲಿಕಾ ಸಂಪನ್ಮೂಲಗಳು, ಸಂಘಟನೆ, ಆಡಳಿತ, ವಿದ್ಯಾರ್ಥಿಗಳ ಕುರಿತು ಮಾಹಿತಿ ಪಡೆದುಕೊಂಡಿತು.
ನಂತರ ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಯಿತು. ವಿದ್ಯಾರ್ಥಿನಿಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ನ್ಯಾಕ್ ಕಮಿಟಿಯ ಧಾರವಾಡದ ವಿಶೇಷ ಅಧಿಕಾರಿ ಸುಧಾ ಹೆಗಡೆ, ಪ್ರಾಚಾರ್ಯ ಗಂಗಾಧರ ಗುಮ್ಮಗೋಳಮಠ ಹಾಗೂ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.