ADVERTISEMENT

ಧಾರವಾಡ: ಉದ್ದು, ಶೇಂಗಾ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 12:20 IST
Last Updated 7 ಸೆಪ್ಟೆಂಬರ್ 2018, 12:20 IST
ಜೆಡಿಯು ಮತ್ತು ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು
ಜೆಡಿಯು ಮತ್ತು ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು   

ಧಾರವಾಡ: ‘ಮುಂಗಾರು ಬೆಳೆ ರೈತರ ಕೈಗೆ ಬಂದು ಹಲವು ದಿನಗಳೇ ಆದರೂ, ಹೆಸರು ಹೊರತುಪಡಿಸಿ ಇನ್ನಿತರ ಬೆಳೆಗಳ ಖರೀದಿ ಕೇಂದ್ರವನ್ನು ಸರ್ಕಾರ ತೆರೆದಿಲ್ಲ. ಕೂಡಲೇ ಶಂಗಾ ಮತ್ತು ಉದ್ದು ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಸಂಯುಕ್ತ ಜನತಾದಳದ ಎಂ.ಪಿ.ನಾಡಗೌಡ ಬಣ ಹಾಗೂ ಹಸಿರು ಸೇನೆ ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದರು.

ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಸಂಘಟನೆಗಳು,‘ಸುಮಾರು ಆರು ವರ್ಷಗಳಿಂದ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಿಲುಕಿದ ರೈತರು ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ. ಈ ವರ್ಷ ಬೆಳೆ ಬಂದಿದ್ದರೂ, ಖರೀದಿ ಕೇಂದ್ರ ಆರಂಭವಾಗದೆ ಮಧ್ಯವರ್ತಿಗಳ ಹಾವಳಿಗೆ ಸಿಲುಕುವಂತಾಗಿದೆ. ಇದರಿಂದ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭೀತಿಯಲ್ಲಿದ್ದಾರೆ’ ಎಂದು ವಿವರಿಸಿದ್ದಾರೆ.

‘ಹೆಸರು ಖರೀದಿ ಕೇಂದ್ರ ಆರಂಭಿಸಿರುವ ಸರ್ಕಾರವು, ಕೂಡಲೇ ಉದ್ದು ಮತ್ತು ಶೇಂಗಾ ಖರೀದಿ ಕೇಂದ್ರವನ್ನೂ ಆರಂಭಿಸಬೇಕು. ಇದಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಹೆಸರು ಖರೀದಿ ಕೇಂದ್ರ ಆರಂಭಿಸಿದ್ದು ಸ್ವಾಗತಾರ್ಹ. ಆದರೆ ಪ್ರತಿ ಎಕರೆಗೆ 4 ಕ್ವಿಂಟಲ್ ಖರೀದಿ ಮಿತಿಯನ್ನು 6ಕ್ವಿಂಟಲ್‌ಗೆ ಏರಿಸಬೇಕು. ಹಾಗೆಯೇ ಗರಿಷ್ಠ ಮಟ್ಟವನ್ನು 10ಕ್ವಿಂಟಲ್‌ನಿಂದ 20ಕ್ವಿಂಟಲ್‌ಗೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಜೆಡಿಯುನ ಜಿಲ್ಲಾಧ್ಯಕ್ಷ ಶ್ರೀಶೈಲ ಕಮತರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಿರೋಜಖಾನ್ ಹವಾಲ್ದಾರ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಶಿವು ಬಡಿಗೇರ, ಉಳಪ್ಪ ಭಳಿಗರ, ರೈತಮುಖಂಡರಾದ ನಿಜಗುಣಿ ಕೆಲಗೇರಿ, ಪ್ರವೀಣ ಪಾಟೀಲ, ಚಂದ್ರು ನಿಗದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.