ADVERTISEMENT

ಶಿಥಿಲಗೊಂಡ ಪಾಲಿಕೆ ಕಟ್ಟಡ ನೆಲಸಮ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 13:50 IST
Last Updated 16 ಆಗಸ್ಟ್ 2019, 13:50 IST
ಹುಬ್ಬಳ್ಳಿ ನ್ಯೂ ಮ್ಯಾದರ ಓಣಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮಹಾನಗರ ಪಾಲಿಕೆ ಕಟ್ಟಡವನ್ನು ಕಾರ್ಮಿಕರು ಶುಕ್ರವಾರ ತೆರವುಗೊಳಿಸಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ನ್ಯೂ ಮ್ಯಾದರ ಓಣಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮಹಾನಗರ ಪಾಲಿಕೆ ಕಟ್ಟಡವನ್ನು ಕಾರ್ಮಿಕರು ಶುಕ್ರವಾರ ತೆರವುಗೊಳಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಇಲ್ಲಿನ ನ್ಯೂ ಮ್ಯಾದರ ಓಣಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಪಾಲಿಕೆ ಒಡೆತನದ ಒಂದು ಅಂತಸ್ತಿನ ಕಟ್ಟಡವನ್ನು ಶುಕ್ರವಾರ ನೆಲಸಮಗೊಳಿಸಲಾಯಿತು.

ಕಾರ್ಯಾಚರಣೆ ವೇಳೆ ಮುಂಜಾಗೃತೆಯಾಗಿ ಕಟ್ಟಡದ ಅಕ್ಕಪಕ್ಕದ ಅಂಗಡಿಗಳ ಬಾಗಿಲನ್ನು ಹಾಗೂ ಮನೆಯಲ್ಲಿದ್ದವರನ್ನು ಸಹ ತೆರವು ಮಾಡಲಾಗಿತ್ತು. ಬೆಳಿಗ್ಗೆ 10ರಿಂದ ಆರಂಭವಾದ ತೆರವು ಕಾರ್ಯಾಚರಣೆ ಸಂಜೆ 7ರವರೆಗೂ ನಡೆಯಿತು. ತೆರವುಗೊಳಿಸಿದ ಕಟ್ಟಡ ಅವಶೇಷಗಳನ್ನು ಟ್ರಾಕ್ಟರ್‌ ಮೂಲಕ ಗ್ಲಾಸ್‌ ಹೌಸ್‌ ಪಕ್ಕದ ವಲಯ ಕಚೇರಿ ಬಳಿ ರಾಶಿ ಹಾಕಲಾಗಿದೆ.

‘ಕಳೆದ ವಾರ ಸುರಿದ ಭಾರೀ ಮಳೆಯ ವೇಳೆ ಕಟ್ಟಡ ಶಿಥಿಲಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಅಂಗಡಿಗಳನ್ನು ತಕ್ಷಣ ತೆರವುಗೊಳಿಸಲು ಸೂಚನೆ ನೀಡಿದ್ದರು. ಅಂಗಡಿಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಸ್ಥಳಾಂತರಿಸಲು ಸಹ ಅವಕಾಶ ನೀಡಿಲ್ಲ. ಇದರಿಂದ ಖುರ್ಚಿ, ಫ್ಯಾನ್‌, ಕಟ್ಟಿಗೆ ಉಪಕರಣಗಳು ಸೇರಿದಂತೆ ಅನೇಕ ಸಾಮಗ್ರಿಗಳು ತೆರವು ಕಾರ್ಯಾಚರಣೆ ವೇಳೆ ನಷ್ಟವಾಗಿವೆ’ ಎಂದು ಅಲ್ಲಿ ಬಾಡಿಗೆ ಇದ್ದ ವ್ಯಾಪಾರಸ್ಥ ಪ್ರಕಾಶ ಬುರಬುರೆ ಹೇಳಿದರು.

ADVERTISEMENT

‘ತಿಂಗಳ ಹಿಂದಷ್ಟೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅಂಗಡಿ ನವೀಕರಣ ಮಾಡಿದ್ದೆ. ಕಟ್ಟಡ ಶಿಥಿಲಗೊಂಡಿರುವುದರಿಂದ ಅನಿವಾರ್ಯವಾಗಿ ಅಂಗಡಿ ತೆರವು ಮಾಡಬೇಕಾಯಿತು. ಅಲ್ಲದೆ, ಮಳೆಯಿಂದಾಗಿ ವಿಕಾಸನಗರದಲ್ಲಿರುವ ಮನೆಯೊಳಗೂ ನೀರು ನುಗ್ಗಿತ್ತು. ಅತ್ತ ಮನೆಯನ್ನೂ ಖಾಲಿ ಮಾಡಿದೆ, ಇತ್ತ ಅಂಗಡಿಯನ್ನೂ ಖಾಲಿ ಮಾಡಿದೆ’ ಎಂದು ಜಗದಂಬಾ ರಬ್ಬರ್‌ ಸ್ಟಾಂಪ್ ಅಂಗಡಿ ಮಾಲೀಕ ವೆಂಕಟೇಶ್ ಕಬಾಡೆ ಅಳಲು ತೋಡಿಕೊಂಡರು.

ಸುಮಾರು 20 ವರ್ಷಗಳಿಂದ ಮಹಾನಗರ ಪಾಲಿಕೆಯ ಕಟ್ಟಡದಲ್ಲಿನ 15 ಮಳಿಗೆಗಳನ್ನು ಬಾಡಿಗೆ ಪಡೆದು ವ್ಯಾಪಾರ ನಡೆಸುತ್ತಿದ್ದೇವು. ಇದೀಗ ಕಟ್ಟಡ ತೆರವುಗೊಳಿಸಿರುವುದರಿಂದ ನಾವು ಬೀದಿಗೆ ಬಂದಿದ್ದೇವೆ. ಈಗಿನ ಕಟ್ಟಡದ ಹಿಂಭಾಗದಲ್ಲಿಯೇ 10 ಗುಂಟೆ ಪಾಲಿಕೆ ಜಾಗವಿದ್ದು, ಅಲ್ಲಿಯೇ ಹೊಸ ಕಟ್ಟಡ ನಿರ್ಮಿಸಿ ನಮಗೆ ಬಾಡಿಗೆ ನೀಡಬೇಕು’ ಎಂದು ವ್ಯಾಪಾರಸ್ಥರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.