ADVERTISEMENT

ಹುಬ್ಬಳ್ಳಿ: ರಂಜಿಸಿದ ದೇಸಿ ಕ್ರೀಡೆ; ಗಾಳಿಪಟ ಉತ್ಸವಕ್ಕೆ ತೆರೆ

ಹಗ್ಗಜಗ್ಗಾಟ, ಲಗೋರಿ, ಚೆಸ್, ಚಿನ್ನಿದಾಂಡು ಸ್ಪರ್ಧೆ ಆಯೋಜನೆ, ಗಮನ ಸೆಳೆದ ಕುಸ್ತಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 5:39 IST
Last Updated 23 ಜನವರಿ 2023, 5:39 IST
ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಬಳಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದ ಕೊನೆಯ ದಿನವಾದ ಭಾನುವಾರ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿದ್ದರು
ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಬಳಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದ ಕೊನೆಯ ದಿನವಾದ ಭಾನುವಾರ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿದ್ದರು   

ಹುಬ್ಬಳ್ಳಿ: ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಭಾನುವಾರ ಅದ್ಧೂರಿ ತೆರೆ ಬಿದ್ದಿತು. ಕಡೆಯ ದಿನದಂದು ಪ್ರೇಕ್ಷಕರು, ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ತರಹೇವಾರಿ ವರ್ಣಮಯ ಗಾಳಿಪಟಳ ಜೊತೆಗೆ, ದೇಸಿ ಕ್ರೀಡೆಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಂಸದ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ, ಕ್ಷಮತಾ ಸೇವಾ ಸಂಸ್ಥೆಯಿಂದ ನಗರದ ನೃಪತುಂಗ ಬೆಟ್ಟದ ಬಳಿಯ ವೆಂಕಟರಮಣ ದೇವಸ್ಥಾನದ ಬಳಿಯ ಮೈದಾನದಲ್ಲಿ ಉತ್ಸವ ಆಯೋಜಿಸಲಾಗಿತ್ತು.

ದೇಸಿ ಕ್ರೀಡೆಗಳಾದ ಹಗ್ಗಜಗ್ಗಾಟ, ಗೋಣಿಚೀಲದೊಂದಿಗೆ ಜಿಗಿಯುವ ಸ್ಪರ್ಧೆ, ಲಗೋರಿ, ಬುಗುರಿ, ಚದುರಂಗ, ಚಿನ್ನಿ–ದಾಂಡು ಹಾಗೂ ಕುಸ್ತಿ ಗಮನ ಸೆಳೆದವು. ಉತ್ಸವದಲ್ಲಿ ಭಾಗವಹಿಸಿದ್ದವರು ಕ್ರೀಡೆಗಳನ್ನು ನೋಡುವುದಷ್ಟೇ ಅಲ್ಲದೆ, ಕೆಲ ಕ್ರೀಡೆಗಳನ್ನು ಆಡಿಯೂ ಖುಷಿಪಟ್ಟರು.

ADVERTISEMENT

ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಕ್ಕಳ ತಂಡಗಳು ಶಕ್ತಿ ಪ್ರದರ್ಶಿಸಿದವು. ಲಗೋರಿ, ಚಿನ್ನದಾಂಡು ಆಡಿ ಕುಣಿದು ಕುಪ್ಪಳಿಸಿದರು. ಕಾಲುಗಳಿಗೆ ಗೋಣಿಚೀಲ ಹಾಕಿಕೊಂಡು ಜಿಗಿದು ಸಂಭ್ರಮಿಸಿದರು. ಕುಸ್ತಿ ಅಖಾಡಕ್ಕಿಳಿದು ವೃತ್ತಿಪರರಂತೆ ಪಟ್ಟು ಹಾಕಿದರು. ಮಹಿಳೆಯರು ಮತ್ತು ಯುವತಿಯರು ಕೂಡ ಹಗ್ಗಜಗ್ಗಾಟ ಮತ್ತು ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕ್ರೀಡೆಗಳಲ್ಲಿ ಭಾಗವಹಿಸಿದವರಿಗೆ ಆಯೋಜಕರು ಪ್ರಮಾಣಪತ್ರ ವಿತರಿಸಿದರು.

ಆಕರ್ಷಿಸಿದ ಗಾಳಿಪಟಗಳು: ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆವರೆಗೂ ವೃತ್ತಿಪರವಾಗಿ ಗಾಳಿಪಟ ಹಾರಿಸುವವರು 30 ಮೀಟರ್ ಉದ್ದದ ‘ಸ್ನೇಕ್’, 12 ಮೀಟರ್‌ನ ‘ಟ್ರಿಬೋಲೈಟ್’, 8 ಮೀಟರ್‌ನ ‘ಮಾರಿಯೋ’, 4 ಮೀಟರ್‌ನ ‘ಮಿನಿಯೇಚಸ್’ ಹಾಗೂ 3 ಮೀಟರ್‌ ‘ಟೈಗರ್ ಇನ್‌ಪ್ಲೇಟೆಬಲ್’ ಸೇರಿದಂತೆ ವಿವಿಧ ವಿನ್ಯಾಸಗಳ ಗಾಳಿಪಟಗಳನ್ನು ಹಾರಿಸಿದರು.

ಬೆಳಗಾವಿಯ ಸಂದೇಶ ಕಡ್ಡಿ ಒಂದೇ ದಾರದಲ್ಲಿ 100 ಗಾಳಿಪಟ ಹಾರಿಸಿ ಗಮನ ಸೆಳೆದರು. ಲಿಥುವೇನಿಯಾ ದೇಶದ ಡೊನಾಟಸ್ ಡಮ್ಕಿಸ್ ಹಾಗೂ ದಾಲಿಯಾ ಬ್ಯುಕ್ಲೆಟ್ ಅವರ ‘ಲೋ ವಿಂಡ್ ಶ್ರೆಡ್ಡರ್’ ಗಾಳಿಪಟ ಜನರನ್ನು ಆಕರ್ಷಿಸಿತು. ಮೈದಾನದ ಹೊರಭಾಗದಲ್ಲಿ ಮಕ್ಕಳು ಸಹ ಗಾಳಿಪಟ ಹಾರಿಸಿ ನಲಿದರು.

ಗಮನ ಸೆಳೆದ ಮಳಿಗೆಗಳು: ಉತ್ಸವದ ಅಂಗವಾಗಿ ಆಹಾರ, ಬಟ್ಟೆ ಹಾಗೂ ಔಷಧ ಮಳಿಗೆಗಳನ್ನು ತೆರೆಯಲಾಗಿತ್ತು. ಬಗೆಬಗೆಯ ತಿನಿಸುಗಳು, ದಾವಣಗೆರೆ ಬೆಣ್ಣೆದೋಸೆ, ಮಿರ್ಚಿ, ಮಂಡಕ್ಕಿ, ಗಿರ್ಮಿಟ್ ಸೇರಿದಂತೆ ಹಲವು ತಿನಿಸುಗಳನ್ನು ಜನ ಸವಿದರು. ವಿವಿಧ ಭಾಗದಿಂದ ಬಂದಿದ್ದ ಬಟ್ಟೆ ಮಳಿಗೆಗಳಲ್ಲಿ ತಮ್ಮಿಷ್ಟದ ಉಡುಪು ಹಾಗೂ ಆಯುರ್ವೇದ ಮಳಿಗೆಗಳಲ್ಲಿ ಔಷಧ ಖರೀದಿಸಿದರು.

‘ಉತ್ಸವದ ಆಯೋಜಕರು ಜನರಿಗೆ ಉಚಿತವಾಗಿ ಬೆಳ್ಳುಳ್ಳಿ ಚುರುಮುರಿ ಹಾಗೂ ಮಿರ್ಚಿ ವಿತರಿಸಿದರು. ಶನಿವಾರ 15 ಸಾವಿರ ಹಾಗೂ ಭಾನುವಾರ 20 ಸಾವಿರಕ್ಕೂ ಅಧಿಕ ಜನರು ಸಾಲುಗಟ್ಟಿ ನಿಂತು ಪಡೆದರು’ ಎಂದು ಧಾರವಾಡದ ಆಹಾರ ಮಳಿಗೆಯ ಶ್ರೀಧರ್ ಕೌತಾಳ ತಿಳಿಸಿದರು.

****

ಕುಸ್ತಿಯಲ್ಲಿ ಸಂಜೀವ ಇಂಗಳಿ ಪ್ರಥಮ: ಉತ್ಸವದ ಅಂಗವಾಗಿ ಆಯೋಜಿಸಿದ್ದ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಬೆಳಗಾವಿಯ ಸಂಜೀವ ಇಂಗಳಿ ಪ್ರಥಮ, ಹಣಮಂತ ಇಂಗಳಗಿ ದ್ವಿತೀಯ ಹಾಗೂ ಕಾರ್ತಿಕ್ ಇಂಗಳಿ ಮತ್ತು ಗುತ್ತೆಪ್ಪ ರಾಣೆಬೆನ್ನೂರು ತೃತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಕಾವ್ಯಾ ದಾನೇನವರ ಪ್ರಥಮ ಮತ್ತು ಪುಷ್ಪಾ ಧಾರವಾಡ ದ್ವಿತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ 56 ಸ್ಪರ್ಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.