ಹುಬ್ಬಳ್ಳಿ: ‘ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಹಾಗೂ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ಉನ್ನತ ಮಟ್ಟಕ್ಕೆ ಬೆಳೆದು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದು ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ ಹೇಳಿದರು.
ವಿದ್ಯಾನಗರದಲ್ಲಿರುವ ಕೆಎಲ್ಇ ಸಂಸ್ಥೆಯ ಎಚ್.ಎಫ್. ಕಟ್ಟಿಮನಿ ಕನ್ನಡ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಅಂತರ ಶಾಲಾ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ‘ವಿಜ್ಞಾನದಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲವೂ ಇದೆ. ಮನುಕುಲಕ್ಕೆ ಅನುಕೂಲವಾಗುವ ಆವಿಷ್ಕಾರಗಳತ್ತ ಎಲ್ಲರೂ ಗಮನ ಹರಿಸಬೇಕು’ ಎಂದರು.
ಶಾಲೆಯ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಬಿ.ಬಿ. ನಾಯಕ್ ಮಾತನಾಡಿ, ‘ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ವಸ್ತು ಪ್ರದರ್ಶನ ತೀರ್ಪುಗಾರರಾಗಿ ಭಾಗವಹಿಸಿದ್ದ ಶಿಕ್ಷಕ ಹಾಗೂ ಸಾಹಿತಿ ಕೆ.ಎಚ್. ನಾಯಕ್, ‘ವಿದ್ಯಾರ್ಥಿಗಳ ಪ್ರಾಮಾಣಿಕವಾಗಿ ನಿರಂತರ ಪ್ರಯತ್ನ ಮಾಡಿದರೆ ಸೃಜನಶೀಲವಾದ ಅತ್ಯುತ್ತಮ ಮಾದರಿಗಳನ್ನು ತಯಾರಿಸಬಹುದು. ಸ್ಪರ್ಧೆಗಳಲ್ಲಿ ಭಾಗವಹಿಸಿದರೆ, ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು’ ಎಂದು ಸಲಹೆ ನೀಡಿದರು.
ವಿವಿಧ ಶಾಲೆಗಳ ಸುಮಾರು 48 ಪ್ರಾಯೋಗಿಕ ಮಾದರಿಗಳನ್ನು ಪ್ರದರ್ಶಿಸಲಾಯಿತು. ಮುಖ್ಯ ಶಿಕ್ಷಕರಿ ಎಲ್.ಜಿ. ಗಾಣಿಗೇರ, ಶಿಕ್ಷಕಿಯರಾದ ವಿ.ವಿ. ಹುದ್ದಾರ, ಎಸ್.ಸಿ. ಸವದತ್ತಿ ಹಾಗೂ ಪಿ.ಎಸ್. ಕಳ್ಳಿಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.