
ಧಾರವಾಡ: ವಿಮಾದಾರಗೆ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ನೀಡದ ಪ್ರಕರಣದಲ್ಲಿ ಎಚ್ಡಿಎಫ್ಸಿ ಎರ್ಗೋ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಬಡ್ಡಿಸಮೇತ ಚಿಕಿತ್ಸೆ ವೆಚ್ಚ ನೀಡಲು ಆದೇಶಿಸಿದೆ.
ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಆದೇಶ ನೀಡಿದ್ದಾರೆ. ವಿಮಾದಾರಗೆ ಪರಿಹಾರ ₹ 50 ಸಾವಿರ, ಪ್ರಕರಣದ ವೆಚ್ಚ ₹ 10 ಸಾವಿರ, ಹಾಗೂ ಆಸ್ಪತ್ರೆ ಖರ್ಚು ₹ 11 ಸಾವಿರಕ್ಕೆ (2024 ಆ.15ರಿಂದ) ವಾರ್ಷಿಕ ಶೇ 8 ಬಡ್ಡಿ ಲೆಕ್ಕ ಹಾಕಿ ಮೊತ್ತ ನೀಡಬೇಕು ಎಂದು ಆದೇಶಿಸಿದ್ದಾರೆ.
ಏನಿದು ಪ್ರಕರಣ?: ಹುಬ್ಬಳ್ಳಿಯ ರಾಜಾಜಿನಗರದ ನಿವಾಸಿ ಯಲ್ಲಪ್ಪ ವಾಲಿಕರ ಅವರು ಪತ್ನಿ, ಮಕ್ಕಳು ಸಹಿತ ಆರೋಗ್ಯ ವಿಮೆ ಮಾಡಿಸಿದ್ದರು. ₹ 23,072 ವಿಮಾ ಕಂತು ಪಾವತಿಸಿದ್ದರು. ಅವರು ಕುಟುಂಬ ಸಮೇತ ಶಿವಮೊಗ್ಗ ಜಿಲ್ಲೆಯ ವಡ್ಡಿಗೇರಿ ಹಳ್ಳಿಗೆ ತೆರಳಿದ್ದರು. ಅಲ್ಲಿ ಪುತ್ರಿ ಮೈತ್ರಿ ಅವರಿಗೆ ಡೆಂಗಿ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಎರಡು ದಿನ ದಾಖಲಾಗಿದ್ದರು. ಆಸ್ಪತ್ರೆಗೆ ₹ 11ಸಾವಿರ ಖರ್ಚಾಗಿತ್ತು. ಯಲ್ಲಪ್ಪ ಅವರು ಚಿಕಿತ್ಸೆ ವೆಚ್ಚ ಪಡೆಯಲು ವಿಮಾ ಕಂಪನಿಗೆ ಮನವಿ ಸಲ್ಲಿಸಿದ್ದರು. ವಿಮಾ ಕಂಪನಿಯವರು ₹ 9 ಸಾವಿರ ನೀಡುವುದಾಗಿ ಹೇಳಿದ್ದರು. ಯಲ್ಲಪ್ಪ ಅವರು 2024 ಡಿ.3ರಂದು ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.