
ಧಾರವಾಡದ ಕೆಲಗೇರಿ ಕೆರೆ ಪ್ರದೇಶದಲ್ಲಿ ಭಾನುವಾರ ಹುಡಾ ಆಯುಕ್ತ ಸಂತೋಷ ಬಿರಾದಾರ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರು ಶಾಸಕ ಕೋನರೆಡ್ಡಿ ಅವರಿಗೆ ಕೆರೆ ಅಭಿವೃದ್ಧಿ ಡಿಪಿಆರ್ ಕುರಿತು ಮಾಹಿತಿ ನೀಡಿದರು
ಧಾರವಾಡ: ‘ನಗರ ಕೆಲಗೇರಿ ಕೆರೆ ಪ್ರದೇಶದ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ₹ 40 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ’ ಎಂದು ಹು–ಧಾ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಆಯುಕ್ತ ಸಂತೋಷ ಬಿರಾದಾರ ತಿಳಿಸಿದರು.
ಭಾನುವಾರ ಕೆರೆ ಪ್ರದೇಶ ವೀಕ್ಷಣೆ ನಂತರ ಅವರು ಶಾಸಕ ಎನ್.ಎಚ್.ಕೋನರೆಡ್ಡಿ ಅವರಿಗೆ ಕೆರೆ ಅಭಿವೃದ್ಧಿ ಕಾಮಗಾರಿ ಕುರಿತು ಮಾಹಿತಿ ನೀಡಿದರು. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್) ₹ 20 ಕೋಟಿ ನೆರವು, ಹುಡಾ ಹಾಗೂ ಪಾಲಿಕೆಯಿಂದ ತಲಾ ₹ 10 ಕೋಟಿ ಅನುದಾನ ಒದಗಿಸಲು ಯೋಜಿಸಲಾಗಿದೆ. ಜಿಲ್ಲಾಧಿಕಾರಿ, ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ’ ಎಂದು ತಿಳಿಸಿದರು.
‘ಕೆಸರು ನೆಲೆಗೊಳ್ಳುವ ತೊಟ್ಟಿ (ಸೆಡಿಮೆಂಟೆಷನ್ ಟ್ಯಾಂಕ್) ನಿರ್ಮಾಣ ಮಾಡಲಾಗುವುದು. ಕೆರೆಗೆ ಕೊಳಕು ನೀರು ಸೇರದಂತೆ ಕ್ರಮ ವಹಿಸಲಾಗುವುದು. ಪಕ್ಷಿಗಳ ಚಲನವಲನಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕೆರೆ ಭಾಗವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.
‘ಕೆರೆ ಪಕ್ಕದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಬೇಕು. ಕೆರೆ ಪ್ರದೇಶದಲ್ಲಿ ಕಾವಲುಗಾರರನ್ನು ನೇಮಿಸಬೇಕು’ ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು.
‘ಇಬ್ಬರು ಕಾವಲುಗಾರರನ್ನು ನೇಮಕ ಮಾಡಲಾಗುವುದು. ವಾಹನ ನಿಲುಗಡೆಗೂ ಜಾಗ ವ್ಯವಸ್ಥೆ ಮಾಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.
ಡಿಪಿಆರ್ಗೆ ಹೊಸದಾಗಿ ಏನಾದರೂ ಸೇರಿಸುವುದಿದ್ದರೆ ಪರಿಶೀಲಿಸಿ ಕ್ರಮ ವಹಿಸಬೇಕು. ಕೆರೆಯನ್ನು ಅಂದಗೊಳಿಸಬೇಕು. ವ್ಯವಸ್ಥಿತವಾಗಿ ಎಲ್ಲ ಸೌಕರ್ಯ ಕಲ್ಪಿಸಬೇಕುಎನ್.ಎಚ್.ಕೋನರೆಡ್ಡಿ ಶಾಸಕ