ADVERTISEMENT

ಧಾರವಾಡ: ಸಾರ್ವಜನಿಕ ಶೌಚಾಲಯ, ರಸ್ತೆ ನಿರ್ಮಾಣಕ್ಕೆ ಆದ್ಯತೆ 

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 6:53 IST
Last Updated 20 ಫೆಬ್ರುವರಿ 2026, 6:53 IST
ಧಾರವಾಡದ ಮಣಕಿಲ್ಲಾದ ಮೀನು ಮಾರುಕಟ್ಟೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ
ಧಾರವಾಡದ ಮಣಕಿಲ್ಲಾದ ಮೀನು ಮಾರುಕಟ್ಟೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ   

ಧಾರವಾಡ: ನಗರದ 14ನೇ ವಾರ್ಡ್‌ನಲ್ಲಿ ಶೇ 50ರಷ್ಟು ವಾಣಿಜ್ಯ ಹಾಗೂ ಶೇ 50ರಷ್ಟು ವಸತಿ ಪ್ರದೇಶ ಹೊಂದಿದೆ. ಹಲವಡೆ ಸಿ.ಸಿ ರಸ್ತೆ ನಿರ್ಮಾಣ, ಒಳರಸ್ತೆಗಳಿಗೆ ಪೇವರ್ಸ್ ಅಳವಡಿಕೆ, ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿಗಳು ನಡೆದಿವೆ.

ವಾರ್ಡ್‌ನಲ್ಲಿ ನಿರಂತರವಾಗಿ ನೀರು ಪೂರೈಕೆ ವ್ಯವಸ್ಥೆ ಇದೆ. ಮಣಕಿಲ್ಲಾ, ಟಿಕಾರೆ ರಸ್ತೆ, ಜಕಣಿಬಾವಿ ಡಾಂಬರೀಕರಣ, ಸುಭಾಷ ರಸ್ತೆ, ಬೋಸಪ್ಪ ಚೌಕ, ಕಾಮನಕಟ್ಟಿ, ತಡಕೊಡ ಓಣಿ, ಲೈನ್ ಬಜಾರ್‌, ಗಾಂಧಿ ಚೌಕ ಸೇರಿದಂತೆ ಹಲವಡೆ ಸಿ.ಸಿ ರಸ್ತೆ ನಿರ್ಮಿಸಲಾಗಿದೆ. ಪೆಂಡಾರ್ ಓಣಿ, ಮಕಾಂದಾರ ಗಲ್ಲಿ, ಗೌಳಿ ಗಲ್ಲಿ ಸೇರಿದಂತೆ ಹಲವು ಒಳರಸ್ತೆಗಳಲ್ಲಿ ಪೇವರ್ಸ್ ಅಳವಡಿಸಲಾಗಿದೆ. 

ಸೂಪರ್ ಮಾರುಕಟ್ಟೆಯಲ್ಲಿ ಮಳೆ, ಬಿಸಿಲಿನಲ್ಲಿ ವ್ಯಾಪಾರ ನಡೆಸಲಾಗುತ್ತಿದೆ. ಕೆಲವು ವ್ಯಾಪಾರಿಗಳು ತಾಡಪತ್ರಿ ಇನ್ನೂ ಕೆಲವರು ಛತ್ರಿ ಆಶ್ರಯದಲ್ಲಿ ವ್ಯಾಪಾರ ನಡೆಸುತ್ತಾರೆ. ನೆರಳಿಗೆ ಶೆಡ್, ಸಂತೆ ಕಟ್ಟೆ, ಇಂದಿರಾ ಕ್ಯಾಂಟೀನ್ ನಿರ್ಮಿಸಬೇಕು. ಸಾರ್ವಜನಿಕ ಶೌಚಾಲಯ, ಬೀಡಾಡಿ ದನಗಳ ಹಾವಳಿ ತಪ್ಪಿಸಲು ಕ್ರಮ ವಹಿಸಬೇಕು ಎಂದು ವರ್ತಕರು ಒತ್ತಾಯಿಸುತ್ತಾರೆ. 

ADVERTISEMENT

ಗಟಾರ್‌ನಲ್ಲಿ ಕಸ ಹೂಳು ತುಂಬಿಕೊಂಡಿದೆ. ನಿವೇಶನ ಹಾಗೂ ರಸ್ತೆ ಬದಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕಬೇಕು. ಬೀದಿ ನಾಯಿಗಳ ಹಾವಳಿ ತಪ್ಪಿಸಬೇಕು ಎಂದು ನಿವಾಸಿಗಳು ಹೇಳುತ್ತಾರೆ.

ವಾರ್ಡ್‍ನ ಮೀನು ಮಾರುಕಟ್ಟೆಯಲ್ಲಿ ₹ 35 ಲಕ್ಷ ಪಾಲಿಕೆ ಅನುದಾನದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದೆ. ವಾರ್ಡ್‌ನಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ಸಂಜೆ 6 ರಿಂದ ರಾತ್ರಿ 10ರವರೆಗೆ ಕಸ ವಿಲೇವಾರಿ ನಡೆಸಲಾಗುತ್ತಿದೆ. ರಸಲಪೂರ ಮಜಿದ್, ಮೀನು ಮಾರುಕಟ್ಟೆಯಲ್ಲಿ ಎರಡು ಹೈಮಾಸ್ಟ್ ದೀಪ ಅಳವಡಿಸಲಾಗಿದೆ. 

ಧಾರವಾಡದ ತಡಕೋಟ ಓಣಿಯಲ್ಲಿ ಸಿ.ಸಿ. ರಸ್ತೆ ನಿರ್ಮಿಸಿರುವುದು 
ವಾರ್ಡ್‍ನಲ್ಲಿ ಹಲವೆಡೆ ಗಟಾರ ಸಮಸ್ಯೆ ಇದೆ. ಹೊಸಗಟಾರ ನಿರ್ಮಿಸಲು ಕ್ರಮವಹಿಸಬೇಕು. ನಿರಂತರ ನೀರು ಪೂರೈಕೆ ವ್ಯವಸ್ಥೆ ಇದೆ
ಗೋಪಾಲ ಜೋಶಿ ಗಾಂಧಿ ಚೌಕ ನಿವಾಸಿ
ಸೂಪರ್ ಮಾರುಕಟ್ಟೆ ಹೈಟೆಕ್‍ಗೊಳಿಸಲು ₹10 ಕೋಟಿ ಅಂದಾಜು ವೆಚ್ಚದ ವಿಸ್ಕೃತ ಯೋಜನಾ ವರದಿ (ಡಿಪಿಆರ್) ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಕ್ರಮ ವಹಿಸಲಾಗುವುದು
ಶುಂಭುಗೌಡ ಸಾಲಮನಿ ಪಾಲಿಕೆ ಸದಸ್ಯ 14ನೇ ವಾರ್ಡ್
ವಾರ್ಡ್‌ನಲ್ಲಿ ಕಸ ಸಂಗ್ರಹಕ್ಕೆ ವಾಹನಗಳು ನಿಯಮಿತವಾಗಿ ಬರುತ್ತವೆ. ಹಲವಡೆ ಸಿ.ಸಿ. ರಸ್ತೆ ಪೇವರ್ಸ್‌ ಅಳವಡಿಸಲಾಗಿದೆ. ಕಸ ವಿಲೇವಾರಿಯಾಗುತ್ತದೆ.
ಶರ್ಫುದ್ದೀನ್ ಹಾಲಭಾವಿ ಮಣಕಿಲ್ಲಾ ನಿವಾಸಿ

‘ವಿವಿಧ ಕಾಮಗಾರಿಗೆ ಅನುದಾನ ಬಳಕೆ’

ಸೂಪರ್ ಮಾರುಕಟ್ಟೆಗೆ ₹ 40 ಲಕ್ಷ ಅನುದಾನದಲ್ಲಿ ಪೇವರ್ಸ್ ಆಳವಡಿಸಲಾಗಿದೆ. ₹ 2 ಕೋಟಿ ಅನುದಾನದಲ್ಲಿ ಸಿ.ಸಿ.ರಸ್ತೆ ಹಾಗೂ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ₹40 ಲಕ್ಷದಲ್ಲಿ ಮಣಕಿಲ್ಲಾದಲ್ಲಿ ಡಾಂಬರೀಕರಣ ₹40 ಲಕ್ಷ ಅನುದಾನದಲ್ಲಿ ರಸಲಪೂರದಲ್ಲಿ ಗಟಾರಗಳು ಹಾಗೂ ಪೇವರ್ಸ್ ಅಳವಡಿಕೆ ₹30 ಲಕ್ಷ ಅನುದಾನದಲ್ಲಿ ತಡಕೋಡ ಓಣಿ ಸಿ.ಸಿ.ರಸ್ತೆ ನಿರ್ಮಿಸಲಾಗಿದೆ. ₹50 ಲಕ್ಷ ಅನುದಾನದಲ್ಲಿ ಜಕಣಿಬಾವಿ ಟಿಕಾರೆ ರಸ್ತೆ ಡಾಂಬರೀಕರಣ ಹಾಗೂ ಎಲ್ ಇಡಿ ದೀಪ ಅಳವಡಿಸಲಾಗಿದೆ’ ಎಂದು 14 ನೇ ವಾರ್ಡ್ ಸದಸ್ಯ ಶುಭುಗೌಡ ಸಾಲಮನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.