ADVERTISEMENT

ಮಧುಮೇಹ ಸಾಮಾನ್ಯ: ಜಾಗೃತಿ ಅಗತ್ಯ

ವಿಶ್ವ ಮಧುಮೇಹ ದಿನದ ಅಂಗವಾಗಿ ಜಾಗೃತಿ, ತಪಾಸಣೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 6:02 IST
Last Updated 15 ನವೆಂಬರ್ 2022, 6:02 IST
ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಲಾದ ಕಾರ್ಯಾಗಾರದಲ್ಲಿ ಡಾ. ಶಶಿ ಪಾಟೀಲ ಮಾತನಾಡಿದರು
ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಲಾದ ಕಾರ್ಯಾಗಾರದಲ್ಲಿ ಡಾ. ಶಶಿ ಪಾಟೀಲ ಮಾತನಾಡಿದರು   

ಧಾರವಾಡ: ವಿಶ್ವ ಮಧುಮೇಹ ದಿನದ ಅಂಗವಾಗಿ ನಗರದ ವಿವಿಧ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲಿ ಸಕ್ಕರೆ ಕಾಯಿಲೆ ಕುರಿತು ಜಾಗೃತಿ, ತಪಾಸಣೆ ಹಾಗೂ ಮಾರ್ಗದರ್ಶನ ಶಿಬಿರಗಳು ಸೋಮವಾರ ನಡೆದವು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್‌ಸಿಡಿ ಘಟಕದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ‘ಶಿಕ್ಷಣದಿಂದ ಭವಿಷ್ಯದ ರಕ್ಷಣೆ’ ಘೋಷವಾಕ್ಯದಡಿ ಮಧುಮೇಹ, ರಕ್ತದೊತ್ತಡ ಮತ್ತು ಸಾಮಾನ್ಯ ಕ್ಯಾನ್ಸರ್‌ ಉಚಿತತಪಾಸಣೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ‘ಬದಲಾದ ಜೀವನ ಶೈಲಿ, ಅನಿಯಮಿತ ಆಹಾರ ಅಭ್ಯಾಸ, ದೈಹಿಕ ಶ್ರಮ ಇಲ್ಲದಿರುವುದು ಮಧುಮೇಹಕ್ಕೆ ಕಾರಣವಾಗಿವೆ. 30 ವರ್ಷ ಮೇಲಿನ ಎಲ್ಲರೂ ಮಧುಮೇಹ ತಪಾಸಣೆಗೆ ಒಳಪಡಬೇಕು. ಮಧುಮೇಹ ಖಚಿತಪಟ್ಟರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಆರೋಗ್ಯ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಮಧುಮೇಹ ತಪಾಸಣೆ ಲಭ್ಯವಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಎನ್‌ಸಿಡಿ ಕ್ಲಿನಿಕ್‌ಗಳಲ್ಲಿ ಒಟ್ಟು 56ಸಾವಿರ ಜನರು ಮಧುಮೇಹ ತಪಾಸಣೆಗೆ ಒಳಪಟ್ಟಿದ್ದಾರೆ. ಇವರಲ್ಲಿ 694 ಜನರಲ್ಲಿ ಹೊಸದಾಗಿ ಮಧುಮೇಹ ಪತ್ತೆಯಾಗಿದೆ. ಹೀಗಾಗಿ ಹೊಸ ಮತ್ತು ಹಳೆಯ ರೋಗಿಗಳು ಸೇರಿ ಮಧುಮೇಹ ಇರುವ 4,458 ಜನರಿಗೆ ಚಿಕಿತ್ಸೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವೀಮಠ, ‘ಅಗತ್ಯ ಮುಂಜಾಗ್ರತಾ ಕ್ರಮಗಳಿಂದ ಮಧುಮೇಹವನ್ನು ದೂರವಿಡಬಹುದು. ನಿಯಮಿತ ಆಹಾರ ಸೇವನೆ ಮತ್ತು ದಿನನಿತ್ಯ ಮುಂಜಾನೆ ನಡಿಗೆ ಬೇಕು’ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ ಮಾನಕರ,ಜಿಲ್ಲಾ ಆಸ್ಪತ್ರೆಯ ಮುಖ್ಯ ಚಿಕಿತ್ಸಕ ಡಾ.ಸ್ವಾಮಿ, ಡಾ. ವಾಸಂತಿ ಜೀರಗಳ ಇದ್ದರು.

ನಗರದ ಹೊಸಯಲ್ಲಾಪುರದ ಟೋಲ್‌ನಾಕಾದಲ್ಲಿರುವ ಸಂತೃಪ್ತ್‌ ಮೆಡಿಕಲ್ ಸೆಂಟರ್‌ನಲ್ಲಿ ನಡೆದ ಮಧುಮೇಹ ಜಾಗೃತಿ ಕಾರ್ಯಾಗಾರದಲ್ಲಿ ಡಾ. ಅನೂಷಾ ಭಂಡಾರ್ಕರ್ ಅವರು ಮಧುಮೇಹ ತಪಾಸಣೆ ಶಿಬಿರ ಆಯೋಜಿಸಿದ್ದರು.

ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು ಹಾಗೂ ಪಾದಗಳಲ್ಲಿ ಹುಣ್ಣುಗಳು ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.