ADVERTISEMENT

ನಾಟಕ ಕಲಾವಿದರಿಗೆ ಕೋವಿಡ್‌ ಕಂಟಕ

ಎರಡನೇ ಅಲೆ ಆತಂಕ: ಪ್ರೇಕ್ಷಕರ ಸಂಖ್ಯೆಯಲ್ಲಿ ಇಳಿಕೆ; ನಾಟಕ ಕಂಪನಿ ಮಾಲೀಕರು ಹೈರಾಣ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 12:22 IST
Last Updated 20 ಏಪ್ರಿಲ್ 2021, 12:22 IST
ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣದ ಪಕ್ಕದಲ್ಲಿ ಟೆಂಟ್ ಹಾಕಿರುವ ಕೆ.ಬಿ.ಆರ್. ಡ್ರಾಮ ಕಂಪನಿಯ ನಾಟಕ ಪ್ರದರ್ಶನ ಸ್ಥಗಿತಗೊಂಡಿದೆ
ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣದ ಪಕ್ಕದಲ್ಲಿ ಟೆಂಟ್ ಹಾಕಿರುವ ಕೆ.ಬಿ.ಆರ್. ಡ್ರಾಮ ಕಂಪನಿಯ ನಾಟಕ ಪ್ರದರ್ಶನ ಸ್ಥಗಿತಗೊಂಡಿದೆ   

ಹುಬ್ಬಳ್ಳಿ: ಕಳೆದ ವರ್ಷ ಕೋವಿಡ್‌ನಿಂದಾಗಿ ನಾಟಕ ಪ್ರದರ್ಶನಗಳು ನಡೆಯದೆ ಕಲಾವಿದರು, ಮಾಲೀಕರು ತೀವ್ರ ಸಂಕಷ್ಟ ಎದುರಿಸಿದ್ದರು. ಇದೀಗ ಕೋವಿಡ್‌ ಎರಡನೇ ಅಲೆ ಮತ್ತೆ ಕಲಾವಿದರ ಬದುಕನ್ನು ತಲ್ಲಣಗೊಳಿಸಿದೆ.

ಕಳೆದ ವರ್ಷ 8 ತಿಂಗಳವರೆಗೆ ನಾಟಕ ಪ್ರದರ್ಶನ ನಡೆಯಲಿಲ್ಲ. ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದ ಕಾರಣ ಪ್ರದರ್ಶನಕ್ಕೆ ಸರ್ಕಾರ ಅವಕಾಶ ನೀಡಿದರೂ, ಪ್ರೇಕ್ಷಕರಿಲ್ಲದೆ ನಷ್ಟ ಅನುಭವಿಸುವಂತಾಯಿತು. ಕ್ರಮೇಣ ನಾಟಕಗಳು ಉತ್ತಮ ಪ್ರದರ್ಶನ ಕಂಡು, ನಿರೀಕ್ಷಿತ ಆದಾಯ ಕಾಣುತ್ತಿರುವಾಗಲೇ ಎರಡನೇ ಅಲೆ ಆಘಾತ ನೀಡಿದೆ. ಕೆಲ ತಿಂಗಳಿಂದ ಹುಬ್ಬಳ್ಳಿಯಲ್ಲಿ ನಾಟಕ ಪ್ರದರ್ಶನ ಸ್ಥಗಿತಗೊಂಡಿದೆ.

‘ಕೆಲವು ತಿಂಗಳಿಂದಷ್ಟೇ ಹೆಚ್ಚು ಪ್ರೇಕ್ಷಕರು ಆಗಮಿಸಿ, ಆದಾಯವೂ ಹೆಚ್ಚುತ್ತಿತ್ತು. ಹುಬ್ಬಳ್ಳಿಯಲ್ಲಿ ನಾಲ್ಕು ತಿಂಗಳು ಪ್ರದರ್ಶನ ನೀಡಿದ್ದೆವು. ಕೋವಿಡ್‌ ಪರಿಷ್ಕೃತ ಮಾರ್ಗಸೂಚಿಯಿಂದಾಗಿ ಚಿತ್ರಮಂದಿರಗಳಂತೆ ನಾಟಕ ಪ್ರದರ್ಶನಗಳಿಗೂ ಶೇ50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಿಲ್ಲ’ ಎಂದು ದಾವಣಗೆರೆಯ ಕೆ.ಬಿ.ಆರ್‌ ನಾಟಕ ಕಂಪನಿಯ ಸಂಚಾಲಕ, ಕಲಾವಿದ ಚಿಂದೋಡಿ ವಿಜಯಕುಮಾರ ತಿಳಿಸಿದರು.

ADVERTISEMENT

‘ನಮ್ಮ ನಾಟಕ ಕಂಪನಿಯಲ್ಲಿ ಕಲಾವಿದರು ಸೇರಿ 50 ಮಂದಿ ಕೆಲಸ ಮಾಡುತ್ತಾರೆ. ಪ್ರತಿದಿನ 2 ಪ್ರದರ್ಶನಗಳು ನಡೆಯುತ್ತಿವೆ. 400 ಆಸನಗಳ ವ್ಯವಸ್ಥೆ ಇದ್ದು, 200 ಪ್ರೇಕ್ಷಕರಿಗಷ್ಟೇ ಅವಕಾಶ ನೀಡಬೇಕಿದೆ. ಅಷ್ಟು ಪ್ರಮಾಣದಲ್ಲೂ ಪ್ರೇಕ್ಷಕರು ಬರುವುದಿಲ್ಲ. ನಿತ್ಯ ನಷ್ಟ ಉಂಟಾಗುತ್ತಿದೆ. ಬಂದ ಹಣದಲ್ಲೇ ಕಲಾವಿದರು ಹಾಗೂ ಸಿಬ್ಬಂದಿಗೆ ವೇತನ ನೀಡಬೇಕಿದೆ. ಎಲ್ಲರೂ ವೃತ್ತಿಪರ ಕಲಾವಿದರಾಗಿರುವುದರಿಂದ ಬೇರೆ ಕೆಲಸ ಗೊತ್ತಿಲ್ಲ. ಒಂದು ವೇಳೆ ಮತ್ತೆ ಲಾಕ್‌ಡೌನ್ ಆದರೆ ನಮ್ಮ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ನಾಟಕ ಪ್ರದರ್ಶನದಿಂದ ಬರುತ್ತಿದ್ದ ಆದಾಯ ಕುಸಿದಿದ್ದು, ನಮ್ಮ ಕಂಪನಿಯಲ್ಲಿರುವ 30 ಕಲಾವಿದರಿಗೆ ವೇತನ ನೀಡುವುದೇ ಕಷ್ಟವಾಗಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ, ಬೇರೆ ಕಡೆಯಿಂದ ಹಣ ಹೊಂದಿಸುತ್ತಿದ್ದೇನೆ. ಲಾಕ್‌ಡೌನ್‌ನಿಂದ ತೊಂದರೆಗೀಡಾದ ಕಲಾವಿದರಿಗೆ ಸರ್ಕಾರದಿಂದ ಸರಿಯಾಗಿ ನೆರವು ಸಿಕ್ಕಿಲ್ಲ. ಬಡ ಕಲಾವಿದರು, ಮಾಲೀಕರು ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿದ್ದಾರೆ’ ಎಂದು ಹಾವೇರಿಯ ಶ್ರೀ ಸಂತ ಶರೀಫ ಶಿವಯೋಗಿ ನಾಟ್ಯ ಸಂಘದ ಖತಾಲ್ ಸಾಬ್ ರಾಜಾ ಸಾಬ್‌ ಬಣಕಾರ ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.