
ಕುಂದಗೋಳ: ತಾಲ್ಲೂಕಿನ ಮೂರು ಶಾಲೆಗಳು ಹುಬ್ಬಳ್ಳಿ–ಧಾರವಾಡ ನಾಗರಿಕ ಪರಿಸರ ಸಮಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಧಾರವಾಡ ವತಿಯಿಂದ 2023-2024ನೇ ಸಾಲಿನ ‘ಪರಿಸರ ಮಿತ್ರ ಶಾಲಾ ಪ್ರಶಸ್ತಿ’ಗೆ ಭಾಜನವಾಗಿವೆ.
‘ಕಮಡೊಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂದಗೋಳ ಪಟ್ಟಣದ ಬಿ.ವೈ.ಪಾಟೀಲ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಶಾಲೆಗಳು ಈ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿವೆ.
ಶಾಲೆಯಲ್ಲಿ ಇಕೋ ಕ್ಲಬ್ ರಚನೆ ಮಾಡುವುದು, ಶಾಲಾ ಆವರಣದಲ್ಲಿ ಸಸ್ಯ ಬೆಳೆಸುವಿಕೆಯಲ್ಲಿ ಮಕ್ಕಳ ಪಾತ್ರ, ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿ ಮೂಡಿಸುವುದು, ಶಾಲೆಯಲ್ಲಿ ಬೆಳೆಸಿರುವ ಸಸ್ಯಗಳ ಸಂಖ್ಯೆ, ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಮುಂತಾದ ಮಾನದಂಡಗಳ ಮೂಲಕ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
ಆಯಾ ಶಾಲೆಗಳಲ್ಲಿನ ಪರಿಸರ ಕಾರ್ಯ ಚಟುವಟಿಕೆ ಅನುಸರವಾಗಿ ಪ್ರಶಸ್ತಿಗಳನ್ನು ವಿತರಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 11 ಶಾಲೆಗಳನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ನಮ್ಮ ತಾಲ್ಲೂಕಿನ ಮೂರು ಶಾಲೆಗಳು ಈ ಪ್ರಶಸ್ತಿ ಪಡೆದದ್ದು ಹೆಮ್ಮೆಯ ಸಂಗತಿ ಎಂದು ಬಿ.ಇ.ಒ ಸಂಜೀವಕುಮಾರ್ ಬೆಳವಟಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.