ಹುಬ್ಬಳ್ಳಿ: ಅಂಜುಮನ್ ಎ ಇಸ್ಲಾಂ ಆಡಳಿತ ಮಂಡಳಿಯ ಚುನಾವಣೆ ಜೂ. 15ರಂದು ನಗರದ ಆರು ಕೇಂದ್ರಗಳಲ್ಲಿ ಜರುಗಲಿದೆ. ಮರುದಿನ ಫಲಿತಾಂಶ ಪ್ರಕಟವಾಗಲಿದೆ.
ಒಂದೂವರೆ ವರ್ಷದ ಹಿಂದೆಯೇ ನಡೆಯಬೇಕಿದ್ದ ಚುನಾವಣೆ ಸಮಿತಿಯ ಆಡಳಿತ ಮಂಡಳಿಯ ಆಂತರಿಕ ಭಿನ್ನಾಭಿಪ್ರಾಯದಿಂದ ನಡೆದಿರಲಿಲ್ಲ. ಇದರಿಂದ ಸಮಿತಿಯ ಕೆಲ ಸದಸ್ಯರು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ 15ರಂದು ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದೆ. ಧಾರವಾಡದ ಉಪವಿಭಾಗಾಧಿಕಾರಿ ಮೊಹಮ್ಮದ್ ಜುಬೇರ್ ಎನ್. ಅವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜುಬೇರ್ ‘ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ, ಆಸ್ಪತ್ರೆ ಮಂಡಳಿ ಕಾರ್ಯದರ್ಶಿ ಸ್ಥಾನಗಳಿಗೆ ತಲಾ ಒಬ್ಬರ ಆಯ್ಕೆಗೆ ಚುನಾವಣೆ ನಡೆಯಲಿದೆ. ಆಸ್ಪತ್ರೆ ಆಡಳಿತ ಮಂಡಳಿಗೆ ನಾಲ್ವರು, ಅಂಜುಮನ್ ಶಿಕ್ಷಣ ಮಂಡಳಿ ಸದಸ್ಯ ಸ್ಥಾನಕ್ಕೆ ಏಳು ಜನ, ಪೋಷಕ ಸದಸ್ಯರ ಸ್ಥಾನಕ್ಕೆ 10 ಮತ್ತು ಆಡಳಿತ ಮಂಡಳಿ ಸದಸ್ಯರ ಸ್ಥಾನಕ್ಕೆ 25 ಜನರನ್ನು ಆಯ್ಕೆ ಮಾಡಲು ಚುನಾವಣೆ ಜರುಗಲಿದೆ’ ಎಂದರು.
‘ಅಂಜುಮನ್ ಸಮಿತಿಯಲ್ಲಿ ಮೊದಲು 11,074 ಸದಸ್ಯರಿದ್ದರು. 26 ಜಮಾತ್ ಸದಸ್ಯರು ಮತ್ತು 413 ಹೊಸ ಮತದಾರರು ಸೇರಿದಂತೆ ಒಟ್ಟು 11,513 ಮತದಾರರು ಈ ಬಾರಿ ಮತ ಚಲಾಯಿಸುವ ಅಧಿಕಾರ ಪಡೆದುಕೊಂಡಿದ್ದಾರೆ. ಸಮಿತಿ ಸದಸ್ಯರಾಗಿ ಡಿಜಿಟಲ್ ಕಾರ್ಡ್ ಇಲ್ಲದಿದ್ದರೂ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ತೋರಿಸಿ ಮತದಾನ ಮಾಡಲು ಅವಕಾಶವಿದೆ’ ಎಂದರು.
‘ಮತದಾರರ ಪಟ್ಟಿ ಪಡೆದುಕೊಳ್ಳಲು ಎಲ್ಲರಿಗೂ ಅವಕಾಶವಿದೆ. ಪಟ್ಟಿ ಬೇಕಾದವರು ₹ 50 ಶುಲ್ಕ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸ ಬಯಸುವವರು ₹ 10 ಸಾವಿರ ತುಂಬಬೇಕು’ ಎಂದರು.
ನಾಮಪತ್ರ ವಿತರಣೆ, ಸ್ವೀಕಾರ ಮತ್ತು ಪರಿಶೀಲನೆ ಕಾರ್ಯ ಘಂಟಿಕೇರಿಯಲ್ಲಿರುವ ಅಂಜುಮನ್ ಎ ಇಸ್ಲಾಂ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಗ್ರಂಥಾಲಯ ಕಟ್ಟಡ ವಿಭಾಗದಲ್ಲಿ ನಡೆಯಲಿದೆ.
ಘಂಟಿಕೇರಿಯ ನೆಹರೂ ಕಾಲೇಜು, ಆಂಗ್ಲೊ ಉರ್ದು ಪ್ರೌಢಶಾಲೆ, ನ್ಯಾಷನಲ್ ಪ್ರೌಢಶಾಲೆ, ಸರ್ಕಾರಿ ಕನ್ನಡ ಮಾಡೆಲ್ ಬಾಲಕರ ಶಾಲೆ ನಂ–5, ಶಾಂತಿನಿಕೇತನ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಮತ್ತು ಕನ್ನಡ ಶಾಲೆ ನಂ–1 ಸರಸ್ವತಿ ವಿದ್ಯಾಲಯದಲ್ಲಿ ಚುನಾವಣೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.