ADVERTISEMENT

ಅಬ್ಬಯ್ಯ ಬಳಿ ಸಮಸ್ಯೆ ತೋಡಿಕೊಂಡ ರೈತರು

ಬಿಡ್ನಾಳ ಬಳಿ ಹೊರ ವರ್ತುಲ ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 15:05 IST
Last Updated 22 ಜೂನ್ 2020, 15:05 IST
ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಪ್ರಸಾದ ಅಬ್ಬಯ್ಯ, ಅಧಿಕಾರಿಗಳೊಂದಿಗೆ ಚರ್ಚಿಸಿದರು
ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ಪ್ರಸಾದ ಅಬ್ಬಯ್ಯ, ಅಧಿಕಾರಿಗಳೊಂದಿಗೆ ಚರ್ಚಿಸಿದರು   

ಹುಬ್ಬಳ್ಳಿ: ನಗರದ ಬಮ್ಮಾಪುರ ವ್ಯಾಪ್ತಿಯ ಬಿಡ್ನಾಳದ ಬಳಿ ನಿರ್ಮಿಸುತ್ತಿರುವ ಹೊರವರ್ತುಲ ರಸ್ತೆ ಕಾಮಗಾರಿಯನ್ನು ಶಾಸಕ ಪ್ರಸಾದ ಅಬ್ಬಯ್ಯ ಸೋಮವಾರ ಪರಿಶೀಲಿಸಿದರು. ಈ ವೇಳೆ ಸ್ಥಳೀಯ ರೈತರು, ರಸ್ತೆ ನಿರ್ಮಾಣದಿಂದ ತಮಗೆ ಆಗುತ್ತಿರುವ ತೊಂದರೆಗಳನ್ನು ಶಾಸಕರ ಗಮನಕ್ಕೆ ತಂದರು.

ರಸ್ತೆಯಲ್ಲಿ ರೈತರಿಗೆ ಅಗತ್ಯವಿರುವೆಡೆ ಅಂಡರ್ ಪಾಸ್ ನಿರ್ಮಿಸಿಲ್ಲ. ಮೇಲ್ಸೇತುವೆಯನ್ನು ಅವೈಜ್ಞಾನಿಕವಗಿ ನಿರ್ಮಿಸುತ್ತಿರುವುದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಹೊಲದಲ್ಲೇ ನಿಲ್ಲುತ್ತಿದೆ. ಇದರಿಂದಾಗಿ, ಬೆಳೆ ಹಾನಿಯಾಗುತ್ತಿದೆ.ರೈತರ ಚಕ್ಕಡಿಯಲ್ಲಿ ಹೊಲಗಳಿಗೆ ತೆರಳಲು ದಾರಿ ಇಲ್ಲದಂತಾಗಿದೆಎಂದು ಅಳಲು ತೋಡಿಕೊಂಡರು.

ರೈತರ ಸಮಸ್ಯೆ ಆಲಿಸಿದ ಅಬ್ಬಯ್ಯ, ‘ಕೆಲಸ ಆರಂಭಕ್ಕೂ ಮುಂಚೆ ಸಮಸ್ಯೆಗಳನ್ನು ತಿಳಿಸಿದ್ದರೆ, ಕಾಮಗಾರಿಯಲ್ಲಿ ಬದಲಾವಣೆ ಮಾಡಬಹುದಾಗಿತ್ತು.ಈಗ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಆದರೂ ಸಚಿವರು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ಗದಗ ಮುಖ್ಯರಸ್ತೆಯಿಂದ ಐನಾಪುರ ಕೆರೆಗೆ ಹೋಗುವ ಕಚ್ಚಾ ರಸ್ತೆಯನ್ನು ₹30 ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಮಾಡಿಕೊಡುವುದಾಗಿ ರೈತರಿಗೆ ಭರವಸೆ ನೀಡಿದರು. ಬೈಪಾಸ್ ರಸ್ತೆ ಮೇಲ್ಸೇತುವೆ ಬಳಿ ನಿರ್ಮಿಸಿರುವ ಪೈಪ್‌ಲೈನ್ ಕಾಮಗಾರಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸ್ಥಳದಲ್ಲಿಕಿರು ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಕಾರವಾರ ರಸ್ತೆಯ ಕೆಂಪಕೆರೆ ಕಾಮಗಾರಿ ವೀಕ್ಷಿಸಿದರು. ಕಾಂಗ್ರೆಸ್ ಮುಖಂಡರಾದ ಮೋಹನ ಅಸುಂಡಿ, ವಿಜನಗೌಡ ಪಾಟೀಲ, ಫರ್ವೇಜ್ ಕೊಣ್ಣೂರು, ರೈತ ಮುಖಂಡರಾದ ಪರುತಪ್ಪ ಬಳಗಣ್ಣವರ, ಫಕ್ಕೀರಪ್ಪ ಕಲ್ಲಣ್ಣವರ, ಶೇಖಣ್ಣ ಬೆಂಡಿಗೇರಿ, ಹನುಮಂತಗೌಡ ಪಾಟೀಲ, ನಿಂಗನಗೌಡ ಪಾಟೀಲ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್‌.ಕೆ. ಮಠದ, ಪಾಲಿಕೆಯ ಅಧೀಕ್ಷಕ ಎಂಜಿನಿಯರ್ ತಿಮ್ಮಪ್ಪ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎ.ಎ. ವೆಂಕಟರಾವ್, ಎಇಇ ಶಿವಕುಮಾರಸ್ವಾಮಿ ಹಾಗೂ ಎಂ.ಎ. ಮಿಶ್ರಿಕೋಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.