ಹುಬ್ಬಳ್ಳಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ 45ನೇ ರೈತ ಹುತಾತ್ಮ ದಿನದ ಅಂಗವಾಗಿ ಸೋಮವಾರ ನಗರದ ರಾಣಿ ಚನ್ನಮ್ಮ ವೃತ್ತದಿಂದ ನವನಗರ ಎಪಿಎಂಸಿ ಕಚೇರಿವರೆಗೆ ನೂರಾರು ರೈತರು ಬೃಹತ್ ಪಾದಯಾತ್ರೆ ನಡೆಸಿದರು.
ಧಾರವಾಡದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಬೇಕಿದ್ದ ಪಾದಯಾತ್ರೆ, ಅಮರಗೋಳ ಎಪಿಎಂಸಿ ಬಳಿ ತಲುಪಿದಾಗ ಧಾರಾಕಾರ ಮಳೆ ಸುರಿಯಿತು. ಹೀಗಾಗಿ ರೈತರು ಅಲ್ಲಿಯೇ ಸಮಾವೇಶಗೊಂಡು, ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.
‘ಈ ಭಾಗದ ನೀರಾವರಿ ಸಮಸ್ಯೆ ನಿವಾರಣೆಗೆ ಮಹದಾಯಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಜನಪ್ರತಿನಿಧಿಗಳು ಭರವಸೆ ನೀಡಿ, ಯೋಜನೆ ಆರಂಭವಾಯಿತು ಎನ್ನುವಂತೆ ಬಿಂಬಿಸುತ್ತಾರೆ. ತಮ್ಮ ರಾಜಕೀಯ ಹಿತಾಸಕ್ತಿಗೆ ರೈತರ ಭಾವನೆ ಹಾಗೂ ಬದುಕಿನ ಜತೆ ಆಟವಾಡುತ್ತ ದಿನದೂಡುತ್ತಿದ್ದಾರೆ. ಯಾವ ಪಕ್ಷದ ಸರ್ಕಾರವೂ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ’ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
‘ರೈತರ ಪಂಪ್ಸೆಟ್ಗಳಿಗೆ ಎಂಟು ಗಂಟೆ ನಿರಂತರ 3 ಫೇಸ್ ವಿದ್ಯುತ್ ನೀಡಬೇಕು. ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ಯೋಜನೆ ಕೈಬಿಡಬೇಕು. ಬೆಳೆ ವಿಮೆ ಪರಿಹಾರವನ್ನು ತಕ್ಷಣ ಬಿಡಗಡೆ ಮಾಡಬೇಕು. ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಬಡ್ಡಿ ರಹಿತ ಸಾಲ ನೀಡಬೇಕು’ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದಿಂದ ವನ್ಯಜೀವಿ ಮಂಡಳಿ ಅನುಮತಿ ಸಿಗಬೇಕಿದೆ. ಈ ಕುರಿತು ಕೇಂದ್ರ ಸರ್ಕಾರದ ಮಲೆ ಒತ್ತಡ ಹಾಕಲಾಗುತ್ತಿದೆ. ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಕಲ್ಲಪ್ಪ ಲಿಗಾಡಿ, ಫಾರೂಕ್ ಕಿಲ್ಲೇದಾರ, ಮಂಜುನಾಥ ಕಾಲವಾಡ, ಮಾರುತಿ ಸುಂಕದ, ಬಸವರಾಜ ಕುಂದಗೋಳ, ನಾಗರಾಜ ಬೆಳವಟಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.