ಹುಬ್ಬಳ್ಳಿ: ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ನಗರದ ಚನ್ನಮ್ಮ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ರೈತರ ವಿರುದ್ಧ 800ಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿಯಾದಾಗ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೊಲ ಗದ್ದೆಗಳಲ್ಲಿ ಕೆಲಸ ಮಾಡಲು ಅವಕಾಶ ನೀಡದೆ, ಪೊಲೀಸ್ ಠಾಣೆ, ನ್ಯಾಯಾಲಯ ಅಲೆಯುವಂತೆ ಮಾಡಲಾಗಿದೆ. ರೈತರನ್ನು ಅನ್ನದಾತ ಎನ್ನುವ ಜನಪ್ರತಿನಿಧಿಗಳು, ಅವರನ್ನು ಶೋಷಿಸುತ್ತಿದ್ದಾರೆಯೇ ಹೊರತು, ಅವರಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸಂಘಟನೆಯ ಮುಖಂಡರು ಆರೋಪಿಸಿದರು.
ಸರ್ಕಾರ ಗಲಭೆ ಸೇರಿದಂತೆ ಇನ್ನಿತರ ಘಟನೆಗಳ ಆರೋಪಿಗಳ ವಿರುದ್ಧದ ಪ್ರಕಣಗಳನ್ನು ಹಿಂಪಡೆಯುತ್ತದೆ. ಅದರ ಜೊತೆಗೆ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಸಹ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಶಿವನಗೌಡ ಪಾಟೀಲ, ಅರ್ಜುನಗೌಡ ಪಾಟೀಲ, ರಮೇಶ ಹುಣಸಿಕಟ್ಟಿ, ವೆಂಕಪ್ಪ ಅರೆನಾದ, ಗೋವಿಂದಪ್ಪ ಮೆಟಗುದ್ದ, ದುಂಡಪ್ಪ ಕೊರೆನ್ನವರ, ಗೌಡಪ್ಪ ಕಾತರಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.