
ಬಂಧನ (ಸಾಂದರ್ಭಿಕ ಚಿತ್ರ)
ನವಲಗುಂದ: ಯಲ್ಲಮ್ಮನ ಗುಡ್ಡದ ಜಾತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ಚಕ್ಕಡಿಗೆ ದಾರಿ ಬಿಡದ ಹಿನ್ನೆಲೆಯಲ್ಲಿ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ ಘಟನೆ ಬುಧವಾರ ತಾಲ್ಲೂಕಿನ ಮೊರಬ ಗ್ರಾಮದ ಹತ್ತಿರ ಜರುಗಿದೆ.
ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ರಮೇಶ ಬೆಂಗೇರಿ ಎಂಬವರು ಯಲ್ಲಮ್ಮನ ಗುಡ್ಡಕ್ಕೆ ತೆರಳುತ್ತಿದ್ದ ಸಮಯದಲ್ಲಿ ಹಿಂಬದಿ ಸವಾರನಾದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರ ಚಕ್ಕಡಿಯಲ್ಲಿದ್ದ ಅವರ ಸಹೋದರ ಹನಮಂತ ಕರಿಗಾರ, ಗುರುನಾಥ ಕರಿಗಾರ, ಬೀರಪ್ಪ ಕುರಿ, ಮುತ್ತು ಮೂಲಿಮನಿ ಹಾಗೂ ಮುಸ್ತಾಕ ಗುಡಸಲಮನಿ ಎಂಬವರು ರಮೇಶ ಬೆಂಗೇರಿ ಅವರ ಚಕ್ಕಡಿಗೆ ಬೆನ್ನು ಹತ್ತಿ ಚಕ್ಕಡಿಯಲ್ಲಿದ್ದ ಮೂರು ಜನರಿಗೆ ಜೀವ ಬೆದರಿಕೆ ಹಾಕಿದ್ದಲ್ಲದೇ ಕೊಲೆ ಮಾಡುವ ಉದ್ದೇಶದಿಂದ ಕೊಡಲಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದರಿಂದ ತೀವ್ರವಾಗಿ ಗಾಯಗೊಂಡ ರಮೇಶ ಬೆಂಗೇರಿ, ಸೋಮಶೇಖರ ಬೆಂಗೇರಿ ಹಾಗೂ ಮಂಜುನಾಥ ನೀರಲಕಟ್ಟಿ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಈ ಕುರಿತು ರಮೇಶ ಬೆಂಗೇರಿ ಎಂಬುವವರ ದೂರಿನ್ವಯ ಪ್ರಕರಣ ದಾಖಲಿಸಿಕೊಂಡ ನವಲಗುಂದ ಪೊಲೀಸರು ಆರೋಪಿತರಾದ ಹನಮಂತ ಕರಿಗಾರ, ಮುತ್ತು ಮೂಲಿಮನಿ ಹಾಗೂ ಮುಸ್ತಾಕ ಗುಡಸಲಮನಿ ಅವರನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.