ಹುಬ್ಬಳ್ಳಿ: ‘ಧಾರ್ಮಿಕ ಆಚರಣೆಗಳು ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಂಬಂಧಗಳಿಗೆ ಮಹತ್ವ ನೀಡಬೇಕು. ಇತ್ತೀಚೆಗೆ ಹಿಂದೂಗಳು ತಮ್ಮ ಸಂಪ್ರದಾಯ, ಉಡುಪು, ಆಚರಣೆಗಳತ್ತ ಗಮನ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದು ಆರ್ಎಸ್ಎಸ್ ಪ್ರಚಾರಕ ಸು. ರಾಮಣ್ಣ ಹೇಳಿದರು.
ಎಸ್.ಎಸ್.ಕೆ. ಸಮಾಜ ಚಿಂತನ-ಮಂಥನ ಸಮಿತಿಯು ಯುಗಾದಿ ಹಾಗೂ ಶ್ರೀರಾಮ ನವಮಿ ಪ್ರಯುಕ್ತ, ನಗರದ ಕಮರಿಪೇಟೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ, ‘ಕೌಟುಂಬಿಕ ಮೌಲ್ಯಗಳು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
‘ಹಿಂದುತ್ವ ಭಾರತ ಶಕ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ರಷ್ಯಾ ಹಾಗೂ ಉಕ್ರೇನ್ ಯುದ್ಧದ ಬೆಳವಣಿಗೆಗಳನ್ನು ನೋಡಿದಾಗ, ಭಾರತವು ಹಿಂದಿಗಿಂತಲೂ ಶಕ್ತಿಯುತವಾಗಿ ಬೆಳದಿದೆ. ಅದರ ಪ್ರತಿಫಲವಾಗಿಯೇ ಅಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಹೋದ ಭಾರತ ವಿದ್ಯಾರ್ಥಿಗಳು ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಭಾರತದ ತ್ರಿವರ್ಣದ ನೆರವಿನಿಂದ ಪಾಕಿಸ್ತಾನದ ವಿದ್ಯಾರ್ಥಿಗಳು ಸಹ ತಮ್ಮ ದೇಶ ತಲುಪಿದ್ದಾರೆ. ಇದು ಭಾರತ ವಿಶ್ವಗುರು ಆಗುತ್ತಿರುವುದರ ಸೂಚಕ’ ಎಂದರು.
ಸತ್ಯ ಸಾಯಿ ಭಜನಾ ಮಂಡಳದಿಂದ ಭಜನೆ ಜರುಗಿತು. ಆಧ್ಯಾತ್ಮಿಕ ಚಿಂತಕ ರಸಜ್ಞದಾಸ ಮಹಾರಾಜ, ಕಮರಿಪೇಟೆಯ ಎಸ್.ಎಸ್.ಕೆ ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಮೋತಿಲಾಲಸಾ ಕಬಾಡಿ, ಚಿಂತನ-ಮಂಥನ ಸಮಿತಿಯ ಹನುಂತಸಾ ಸಿ. ನಿರಂಜನ, ಸರಳಾ ಬಾಂಢಗೆ, ಡಿ.ಕೆ. ಚವ್ಹಾಣ, ಶ್ರೀಕಾಂತ ಹಬೀಬ, ಅಂಬಾಸಾ ಹಬೀಬ, ಮಂಜುನಾಥ ಮಿಸ್ಕಿನ್, ವಿನಾಯಕ ವಾಗುಲೆ, ನೀತಾ ಮೇತ್ರಾಣಿ, ಕುಸುಮಾ ಹಬೀಬ, ರಾಜಶ್ರೀ ಜಡಿ, ವಿದ್ಯಾ ಪೂಜಾರಿ, ಭಾಗ್ಯಶ್ರೀ ಕಠಾರೆ, ಅಭಿಷೇಕ ನಿರಂಜನ, ಹರೀಶ ಜರತಾರಘರ, ಸಾಗರ ಪವಾರ, ಹೀರಾ ಸೋಳಂಕಿ, ವಿನಾಯಕ ಕಬಾಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.