ADVERTISEMENT

ಗುಡ್‌ ಫ್ರೈಡೇ ಆಚರಣೆ: ಯೇಸುವಿನ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 16:04 IST
Last Updated 18 ಏಪ್ರಿಲ್ 2025, 16:04 IST
ಹುಬ್ಬಳ್ಳಿಯ ಬಾಸೆಲ್‌ ಮಿಷನ್‌ ಚರ್ಚ್‌ನಲ್ಲಿ ಗುಡ್‌ ಫ್ರೈ ಡೇ ಅಂಗವಾಗಿ ಪಾದ್ರಿಗಳು ವಿಶೇಷ ಪ್ರಾರ್ಥನೆ ನೆರವೇರಿಸಿದರು
ಹುಬ್ಬಳ್ಳಿಯ ಬಾಸೆಲ್‌ ಮಿಷನ್‌ ಚರ್ಚ್‌ನಲ್ಲಿ ಗುಡ್‌ ಫ್ರೈ ಡೇ ಅಂಗವಾಗಿ ಪಾದ್ರಿಗಳು ವಿಶೇಷ ಪ್ರಾರ್ಥನೆ ನೆರವೇರಿಸಿದರು   

ಹುಬ್ಬಳ್ಳಿ: ನಗರದ ಚರ್ಚ್‌ಗಳಲ್ಲಿ ಗುಡ್‌ ಫ್ರೈಡೇ (ಶುಭ ಶುಕ್ರವಾರ) ಆಚರಣೆ ಜರುಗಿತು. ಯೇಸುಕ್ರಿಸ್ತ ಶಿಲುಬೆಗೇರಿದ ಸ್ಮರಣೆಗಾಗಿ ಅವರು ಬೋಧಿಸಿದ ತತ್ವ, ಸಂದೇಶಗಳನ್ನು ಧ್ಯಾನಿಸಲಾಯಿತು. 

ಕೇಶ್ವಾಪುರದ ಸೇಂಟ್‌ ಜೋಸೆಫ್‌ ಚರ್ಚ್‌, ಶಾಂತಿನಗರದ ಇನ್‌ಫ್ಯಾಂಟ್‌ ಜೀಸಸ್‌ ಚರ್ಚ್‌, ಉಪನಗರ ಸಾರಿಗೆ ಬಸ್‌ ನಿಲ್ದಾಣ ಬಳಿಯ ಬಾಸೆಲ್‌ ಮಿಷನ್‌ ಚರ್ಚ್‌, ಘಂಟಿಕೇರಿಯ ಕ್ರಿಶ್ಚಿಯನ್‌ ಕಾಲೊನಿಯಲ್ಲಿನ ದಿ ಹೋಲಿ ಚರ್ಚ್‌, ಉಣಕಲ್‌ನ ಮುಲ್ಲರ್‌ ಮೆಮೊರಿಯಲ್‌ ಚರ್ಚ್‌ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪಾದ್ರಿಗಳು, ಕ್ರಿಸ್ತನ ಸಂದೇಶ ಬೋಧಿಸಿದರು. ಕ್ರಿಶ್ಚಿಯನ್ನರು ಯೇಸುವಿನಲ್ಲಿ ಪ್ರಾರ್ಥಿಸಿದರು.  

‘ಯೇಸುಕ್ರಿಸ್ತನು ಶಿಲುಬೆಗೇರುವಾಗಲೂ ತನ್ನನ್ನು ಶಿಕ್ಷಿಸಿದವರನ್ನು ಕ್ಷಮಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಆ ಸಮಯದಲ್ಲಿ ಯೇಸು ಹೇಳಿದ ಏಳು ಮಹತ್ವದ ಮಾತುಗಳನ್ನು ಗುಡ್‌ ಫ್ರೈಡೇ ಆಚರಣೆಯಲ್ಲಿ ಧ್ಯಾನಿಸಲಾಗುತ್ತದೆ. ಅದರಂತೆ ಎಲ್ಲರೂ ನಡೆಯಲು ಸಂದೇಶ ನೀಡಲಾಗುತ್ತದೆ. ಇದೊಂದು ರೀತಿಯ ಶೋಕಾಚರಣೆ. ಸಮಾಜದವರ ಮನೆಯಲ್ಲಿ ಯಾವುದೇ ಆಚರಣೆ ಇರುವುದಿಲ್ಲ’ ಎಂದು ಹೆಗ್ಗೇರಿಯ ಸಿಎಸ್‌ಐ ಸುಶಾಂತಿ ಚರ್ಚ್‌ನ ಪಾದ್ರಿ ಅಶೋಕ್ ಎಸ್‌. ಪುನೀತ್‌ ಹೇಳಿದರು.

ADVERTISEMENT

‘ಮಾನವ ಕಲ್ಯಾಣಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಯೇಸುಪ್ರಭುವು ಎಲ್ಲರಿಗೂ ಒಳ್ಳೆಯದನ್ನೇ ಬಯಸಿದರು. ಅದಕ್ಕಾಗಿ ಪ್ರಪಂಚದಾದ್ಯಂತ ಗುಡ್‌ ಫ್ರೈಡೇ ಆಚರಿಸಲಾಗುತ್ತದೆ. ಪ್ರೀತಿಯಿಂದ ಜೀವಿಸಬೇಕು ಹಾಗೂ ದ್ವೇಶ, ಅಸೂಯೆ ತೊರೆಯಬೇಕೆಂಬ ಸಂದೇಶ ನೀಡಲಾಗುತ್ತದೆ. ಕರ್ತನ ರಾತ್ರಿ ಭೋಜನ ಸಂಸ್ಕಾರದಲ್ಲಿ ರೊಟ್ಟಿ ಹಾಗೂ ದ್ರಾಕ್ಷಾರಸ ಸೇವಿಸುತ್ತೇವೆ. ಕೆಲವು ಚರ್ಚ್‌ಗಳಲ್ಲಿ ಶಿಲುಬೆ ಬಟ್ಟೆ ಮುಚ್ಚಲಾಗುತ್ತದೆ’ ಎಂದು ಕಾರವಾರ ರಸ್ತೆಯ ಮಾಯರ್‌ ಸ್ಮಾರಕ ಚರ್ಚ್‌ನ ಪಾದ್ರಿ ಸತ್ಯಬಾಬು ಸ್ಯಾಮುಯಲ್‌ ತಿಳಿಸಿದರು.

ಹುಬ್ಬಳ್ಳಿಯ ಬಾಸೆಲ್‌ ಮಿಷನ್‌ ಚರ್ಚ್‌ನಲ್ಲಿ ಗುಡ್‌ ಫ್ರೈ ಡೇ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್ ಸಮುದಾಯದವರು ಪಾಲ್ಗೊಂಡಿದ್ದರು
ಹುಬ್ಬಳ್ಳಿಯ ಶಾಂತಿನಗರದ ಬಾಲ ಏಸು ಚರ್ಚ್‌ನಲ್ಲಿ ಗುಡ್‌ ಫ್ರೈಡೇ ಅಂಗವಾಗಿ ಯೇಸುಕ್ರಿಸ್ತ ಶಿಲುಬೆಗೇರಿದ ಪ್ರಸಂಗವನ್ನು ಪ್ರದರ್ಶಿಸಲಾಯಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.