ಕಲಘಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ ಧಾರಾಕಾರ ಮಳೆ ಸುರಿಯಿತು. ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಂತಿದ್ದು, ಬೆಳೆ ಹಾನಿಯ ಆತಂಕ ರೈತರನ್ನು ಕಾಡುತ್ತಿದೆ.
ರಸ್ತೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ಪಟ್ಟಣದಲ್ಲಿ ಮಂಗಳವಾರ ನಡೆದ ಸಂತೆಯಲ್ಲಿ ಜನರು ಮಳೆಯಲ್ಲೇ ತರಕಾರಿ ಖರೀದಿಸಿದರು.
ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದ ಚರ್ಚ್ ರಸ್ತೆ ಮೇಲೆ ಚರಂಡಿ ನೀರು ಹಾಗೂ ಮಳೆ ನೀರು ಹರಿದಿದ್ದರಿಂದ ಎಲ್ಲೆಡೆ ಕೊಳಚೆ ಸಂಗ್ರಹವಾಗಿತ್ತು. ಇದರಲ್ಲೇ ವ್ಯಾಪಾರಸ್ಥರು ಹಾಗೂ ಜನರು ಸಂಚರಿಸಬೇಕಾಯಿತು.
‘ಚರಂಡಿಯಲ್ಲಿ ಹೂಳು ತುಂಬಿದ್ದು, ಮಳೆ ಬಂದಾಗ ಚರಂಡಿ ತುಂಬಿ ಹರಿಯುತ್ತದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಚರಂಡಿಯಲ್ಲಿನ ಹೂಳು ತೆರವಿಗೆ ಕ್ರಮ ಕೈಗೊಳ್ಳಬೇಕು’ ಎಂದು ಪಟ್ಟಣದ ಮುಖಂಡ ಶಶಿಕುಮಾರ್ ಕಟ್ಟಿಮನಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.