ADVERTISEMENT

ಹಿರಿಯೂರಿನಲ್ಲಿ ಬಸ್‌ ದುರಂತ: ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 23:30 IST
Last Updated 26 ಡಿಸೆಂಬರ್ 2025, 23:30 IST
<div class="paragraphs"><p>ಸಾವು</p></div>

ಸಾವು

   

ಹುಬ್ಬಳ್ಳಿ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲಡುಕು ಕ್ರಾಸ್ ಬಳಿ ಖಾಸಗಿ ಬಸ್‌ ಮತ್ತು ಕಂಟೇನರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕೆಎಂಸಿ-ಆರ್‌ಐ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಸ್ ಚಾಲಕ ಹಾವೇರಿಯ ಮೊಹಮ್ಮದ್ ರಫೀಕ್ ಹುಲಗೂರ (45) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದಂತಾಗಿದೆ.

‘ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೊಹಮ್ಮದ್ ರಫಿಕ್ ಅವರ ಕಾಲು, ಹೊಟ್ಟೆಗೆ ಬಲವಾಗಿ ಪೆಟ್ಟು ಬಿದ್ದಿತ್ತು.‌ ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಗಾಯಾಳು ಬಸ್ ಕ್ಲೀನರ್ ಮೊಹಮ್ಮದ್‌ ಸಾದಿಕ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ತಿಳಿಸಿದರು.

ADVERTISEMENT

ಚಿತ್ರದುರ್ಗ ವರದಿ: ಅಪಘಾತದಲ್ಲಿ ಸುಟ್ಟು ಕರಕಲಾದವರ ಮೃತದೇಹಗಳ ಡಿಎನ್‌ಎ ಪರೀಕ್ಷೆಗಾಗಿ ಇಲ್ಲಿನ ವೈದ್ಯರ ತಂಡ ಹುಬ್ಬಳ್ಳಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತೆರಳಿದೆ.

ಮೃತಪಟ್ಟವರ ಕುಟುಂಬ ಸದಸ್ಯರ ರಕ್ತದ ಮಾದರಿ ಹಾಗೂ ಮೃತದೇಹಗಳ ಮೂಳೆ ಮಾದರಿಗಳನ್ನು ಸಂಗ್ರಹಿಸಿದ್ದು, ಡಾ.ವೇಣು ಹಾಗೂ ಡಾ.ಅಜಯ್‌ ನೇತೃತ್ವದ ತಂಡ ಹುಬ್ಬಳ್ಳಿಗೆ ತೆರಳಿದೆ.

‘ಡಿಎನ್‌ಎ ಪರೀಕ್ಷಾ ವರದಿ ಬರಲು ಎರಡು ದಿನ ಆಗುತ್ತದೆ. ನಂತರವಷ್ಟೇ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗುವುದು. ಈ ವಿಷಯ ಕುಟುಂಬ ಸದಸ್ಯರ ಗಮನಕ್ಕೆ ತರಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ತಿಳಿಸಿದರು.

ಕುಟುಂಬ ಸದಸ್ಯರು ಈಗಾಗಲೇ ಮೃತದೇಹಗಳ ಗುರುತು ಪತ್ತೆ ಮಾಡಿದ್ದಾರೆ. ಆದರೂ ಪೊಲೀಸರು ನ್ಯಾಯಾಲಯದ ಅನುಮತಿಯೊಂದಿಗೆ ಡಿಎನ್‌ಎ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.