ADVERTISEMENT

₹4.42 ಲಕ್ಷ ಬಂಗಾರದ ಆಭರಣ ಕಳವು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 2:38 IST
Last Updated 16 ಫೆಬ್ರುವರಿ 2021, 2:38 IST

ಹುಬ್ಬಳ್ಳಿ: ಮಂಟೂರು ರಸ್ತೆಯ ಭಾರತಿ ನಗರದ ಸೈಯದ್‌ ಸಲೀಂ ನವಲೂರ ಅವರ ಮನೆ ಬಾಗಿಲು ಮುರಿದು, ಅಲ್ಮೇರಾದಲ್ಲಿದ್ದ ₹4.42 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಹಾಗೂ ₹70 ಸಾವಿರ ನಗದು ಕಳವು ಮಾಡಲಾಗಿದೆ.

₹28 ಸಾವಿರದ ಕಿವಿಯೋಲೆ, ₹1.20 ಲಕ್ಷದ ನೆಕ್ಲೆಸ್, ₹80ಸಾವಿರ ಮೌಲ್ಯದ ಉಂಗುರಗಳು ಸೇರಿದಂತೆ ಒಟ್ಟು 111 ಗ್ರಾಂ ಬಂಗಾರದ ಆಭರಣಗಳು ಕಳವಾಗಿವೆ. ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌ ಚಾಲಕರ ವಿರುದ್ಧ ಪ್ರಕರಣ ದಾಖಲು: ನಗರದ ಚನ್ನಮ್ಮ ವೃತ್ತದ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಆರು ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ ಚಾಲಕರ ವಿರುದ್ಧ ಪೂರ್ವ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ವಿಜಯಪುರ, ಗದಗ ಹಾಗೂ ಹುಬ್ಬಳ್ಳಿ ವಿಭಾಗ ಘಟಕದ ಚಾಲಕರ ವಿರುದ್ಧ ದೂರು ದಾಖಲಾಗಿದೆ. ‘ಹುಬ್ಬಳ್ಳಿಯಿಂದ ವಿಜಯಪುರ, ಗದಗ ಹಾಗೂ ಇತರ ಭಾಗಗಳಿಗೆ ತೆರಳುತ್ತಿದ್ದ ಬಸ್‌ಗಳನ್ನು ಚಾಲಕರು ಚನ್ನಮ್ಮ ವೃತ್ತದ ಬಳಿಯ ನೀಲಿಜಿನ್‌ ರಸ್ತೆ ಕ್ರಾಸ್‌ ಬಳಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದರು. ಟ್ರಾಫಿಕ್‌ ಸಿಗ್ನಲ್‌ನ 100 ಮೀಟರ್‌ ವ್ಯಾಪ್ತಿಯಲ್ಲಿ ಬಸ್‌ಗಳನ್ನು ನಿಲ್ಲಿಸಬಾರದು. ಇದರಿಂದ ಸುಗಮ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತದೆ ಎಂದು ಚಾಲಕರಿಗೆ ತಿಳಿ ಹೇಳಲಾಗಿದೆ. ಆದರೂ ಅವರು ಅಲ್ಲಿಯೇ ಬಸ್‌ಗಳನ್ನು ನಿಲ್ಲಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದರು’ ಎಂದು ಪೂರ್ವ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಎಸ್‌.ಸಿ. ಕಾಡದೇವರಮಠ ತಿಳಿಸಿದರು.

ಹಣ ಕೇಳಿದ್ದಕ್ಕೆ ಜೀವ ಬೆದರಿಕೆ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಗೋಡ ನಿವಾಸಿ ಶಮೀರ್‌ ರೆಹಮಾನ್ ಎಂಬಾತ ಜಾನುವಾರ ಖರೀದಿಸಿದ ₹81.81 ಲಕ್ಷ ನೀಡದೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ತಬೀಬ್‌ಲ್ಯಾಂಡ್‌ ನಿವಾಸಿ ಮಹ್ಮದ್‌ ಬೇಪಾರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹುಬ್ಬಳ್ಳಿ ಎಪಿಎಂಸಿಯಲ್ಲಿ ಜಾನುವಾರು ವ್ಯಾಪಾರ ಮಾಡಿಕೊಂಡಿದ್ದು, ಒಂದು ವರ್ಷದ ಹಿಂದೆ ಶಮೀರ್‌ಗೆ ಜಾನುವಾರುಗಳನ್ನು ಮಾರಾಟ ಮಾಡಿದ್ದೆ. ಆದರೆ, ಹಣ ನೀಡದೆ ಕಾಲ ವಿಳಂಬ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಸಿಕ್ಕಾಗ ಹಣ ಕೇಳಿದ್ದಕ್ಕೆ ಅವಾಚ್ಯ ಶಬ್ದದಿಂದ ಬೈದು, ಪೊಲೀಸರಿಗೆ ದೂರು ನೀಡಿದಲ್ಲಿ ಕೊಲೆ ಮಾಡುವ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.