ADVERTISEMENT

ಧಾರವಾಡ: ಬೇಂದ್ರೆ ನೆನಪುಗಳ ಸಂಗಡ ಬನ್ನಿ ಸಾಧನ ಕೇರಿಗೆ...

ಪ್ರವಾಸೋದ್ಯಮ ಅಭಿವೃದ್ಧಿ ದಾರಿ; ನಿತ್ಯ ಹಲವರು ಭೇಟಿ

ಪ್ರಜಾವಾಣಿ ವಿಶೇಷ
Published 7 ಜುಲೈ 2023, 5:26 IST
Last Updated 7 ಜುಲೈ 2023, 5:26 IST
ಬೇಂದ್ರೆ ಅವರ ನಿವಾಸಕ್ಕೆ ಬಂದಿದ್ದ ಪ್ರವಾಸಿಗರಿಗೆ ಪುನರ್ವಸು ಅವರು ಸಕ್ಕರೆ ನೀಡುತ್ತಿರುವುದು. ಬಿ.ಎಂ.ಕೇದಾರನಾಥ– ಪ‍್ರಜಾವಾಣಿ ಚಿತ್ರ
ಬೇಂದ್ರೆ ಅವರ ನಿವಾಸಕ್ಕೆ ಬಂದಿದ್ದ ಪ್ರವಾಸಿಗರಿಗೆ ಪುನರ್ವಸು ಅವರು ಸಕ್ಕರೆ ನೀಡುತ್ತಿರುವುದು. ಬಿ.ಎಂ.ಕೇದಾರನಾಥ– ಪ‍್ರಜಾವಾಣಿ ಚಿತ್ರ   

ಬಿ.ಜೆ. ಧನ್ಯಪ್ರಸಾದ್‌

ಧಾರವಾಡ: ಸಾಂಸ್ಕೃತಿಕ ನಗರಿಯ ಪ್ರಮುಖ ಆಕರ್ಷಣೆಗಳಲ್ಲಿ ಸಾಧನಕೇರಿಯೂ ಒಂದು. ವರಕವಿ ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಸಹಿತ ಕೆಲ ಸಾಹಿತ್ಯ ದಿಗ್ಗಜರು ನೆಲೆಸಿದ್ದ ನಿವಾಸ, ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಭವನ, ಸಾಧನಕೆರೆ ತಾಣಗಳು ‘ಬಾರೋ ಸಾಧನ ಕೇರಿಗೆ’ ಎಂದು ಆಹ್ವಾನಿಸುತ್ತವೆ.

ಬಾರೋ ಸಾಧನ ಕೇರಿಗೆ

ADVERTISEMENT

ಮರಳಿ ನಿನ್ನೀ ಊರಿಗೆ

ಮಳೆಯು ಎಳೆಯುವ ತೇರಿಗೆ

ಹಸಿರು ಏರಿದೆ ಏರಿಗೆ

ಹಸಿರು ಚಾಚಿದೆ ದಾರಿಗೆ

ನಂದನದ ತುಣುಕೊಂದು ಬಿದ್ದಿದೆ

ನೋಟ ಸೇರದು ಯಾರಿಗೆ?.…

ಬೇಂದ್ರೆ ಅವರು ಸಾಧನ ಕೇರಿಯ ಪರಿಸರವನ್ನು ಹೀಗೆ ವರ್ಣಿಸಿದ್ದರು.

ಅಳ್ನಾವರ ಮಾರ್ಗದಲ್ಲಿ ನಗರದ ಜರ್ಮನ್‌ ಆಸ್ಪತ್ರೆ ಬಸ್‌ ನಿಲ್ದಾಣದಿಂದ ಅನತಿ ದೂರದಲ್ಲಿ ಈ ಕೇರಿ ಇದೆ. ರಸ್ತೆಯ ಇಕ್ಕೆಲಗಳಲ್ಲಿನ ಮರಗಳ ನೆರಳು, ತಂಪು ಹವೆ ಮೇಳೈಸಿವೆ. ಮೇಲ್ನೋಟಕ್ಕೆ ಮಾಮೂಲಿ ಕೇರಿಯಂತೆ ಭಾಸವಾಗುವ ಈ ಪ್ರದೇಶದ ಒಳನೋಟದಲ್ಲಿ ಕಣ್ಣರಳಿಸಿ ನೋಡುವಷ್ಟು ವೈಶಿಷ್ಟ್ಯಗಳು ಇವೆ.

ಶ್ರೀಮಾತಾ ನಿವಾಸ: ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕವಿ ನಿವಾಸ ಶ್ರೀಮಾತಾ ಫಲಕ, ಫಲಕದಲ್ಲಿನ ‘ರಸವೆ ಜನನ, ವಿರಸ ಮರಣ, ಸಮರಸವೇ ಜೀವನ’– ಕವಿವಾಣಿ, ವಿಶ್ವದೊಳನುಡಿಯಾಗಿ ಕನ್ನಡಿಸುತಿಹನು ಅಂಬಿಕಾತನಯನಿವನು ಬರಹಗಳು ಸ್ವಾಗತಿಸುತ್ತವೆ.

ಮನೆಯ ಆವರಣದಲ್ಲಿನ ಶಿಲೆಗಳಲ್ಲಿ ಬೇಂದ್ರೆ ಅವರ ಕೆಲ ಕವನಗಳ (‘ಸಖೀಗೀತ’, ‘ಮುತ್ತೈದೆ’, ‘ಮನದನ್ನೆ’...) ಸಾಲುಗಳು ಇವೆ. ಗಿಡ, ಮರಗಳ ಹಸಿರು ಇದೆ. ಕೆಂಪು ಹೆಂಚಿನ ಮನೆ ಇದು. ಬೇಂದ್ರೆ ಮೊಮ್ಮಗಳು ಪುನರ್ವಸು ಅವರು ಮನೆಯಲ್ಲಿ ವಾಸವಿದ್ದಾರೆ.

ಬೇಂದ್ರೆ ಅವರು ಬಳಸುತ್ತಿದ್ದ ವಸ್ತುಗಳು ಮನೆಯೊಳಗೆ ಇವೆ. ಬೇಂದ್ರೆ ಅವರ ಭಾವಚಿತ್ರ, ಕನ್ನಡಕ, ಪುರಸ್ಕಾರಗಳು, ಸ್ಮರಣಿಕೆಗಳು ಮೊದಲಾದವುಗಳು ಇಲ್ಲಿವೆ. ಬೇಂದ್ರೆ ಅವರ ಪುಸ್ತಕಗಳು ಇವೆ. ಖರೀದಿಗೂ ಲಭ್ಯ ಇವೆ.

ನಿವಾಸದ ಪಡಸಾಲೆ ಭಾಗವು ಸಣ್ಣ ವಸ್ತು ಸಂಗ್ರಹಾಲಯದಂತಿದೆ. ಇಲ್ಲೊಂದು ಸುತ್ತು ಹಾಕಿ ಅಲ್ಲಿರುವ ವಸ್ತು, ಚಿತ್ರ ಇತ್ಯಾದಿ ವೀಕ್ಷಿಸಿದರೆ ಬೇಂದ್ರ ಅವರ ಜೀವನ ವೃತ್ತಾಂತದ ಸಂಕ್ಷಿಪ್ತ ಪರಿಚಯವಾಗುತ್ತದೆ.

ಬೇಂದ್ರೆ ಸ್ಮಾರಕ ಟ್ರಸ್ಟ್‌ ಭವನ: ಶ್ರೀಮಾತಾ ನಿವಾಸದ ಮಗ್ಗುಲಲ್ಲೇ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಭವನ ಇದೆ. ಬೇಂದ್ರೆ ಅವರ ಸಾಹಿತ್ಯ ಪ್ರಚಾರ, ಕವನ ಗಾಯನ, ಸಾಹಿತ್ಯ ಮೊದಲಾದ ಚಟುವಟಿಕೆಗಳನ್ನು ಟ್ರಸ್ಟ್‌ ನಿರ್ವಹಿಸುತ್ತಿದೆ.

ಅಂಬಿಕಾತನಯ ದತ್ತ ದರ್ಶನ ಪ್ರದರ್ಶನ (ಬೇಂದ್ರೆ ಅವರ ಅಪರೂಪದ ಛಾಯಾಚಿತ್ರಗಳು, ಪದವಿ ಪ್ರಮಾಣ ಪತ್ರಗಳು ಮೊದಲಾದವುಗಳ ಸಂಗ್ರಹ), ಗ್ರಂಥಾಲಯ, ಸಭಾಂಗಣಗಳು ಈ ಭವನದಲ್ಲಿವೆ. ಭವನದಲ್ಲಿ ಸಾಹಿತ್ಯ ಗ್ರಂಥಗಳು ಇವೆ. ವಿದ್ಯಾರ್ಥಿಗಳು, ಪ್ರವಾಸಿಗರು, ಸಾಹಿತ್ಯಾಸಕ್ತರು ಸಹಿತ ಹಲವರು ಭವನಕ್ಕೆ ಭೇಟಿ ನೀಡುತ್ತಾರೆ.

ಸಾಧನ ಕೆರೆ: ಬೇಂದ್ರೆ ನಿವಾಸ, ಟ್ರಸ್ಟ್‌ ಭವನದ ಸನಿಹದಲ್ಲೇ ಸಾಧನ ಕೆರೆ (ಬೇಂದ್ರ ಉದ್ಯಾನ) ಇದೆ. ಉದ್ಯಾನದಲ್ಲಿ ಬೇಂದ್ರೆ ಅವರ ಪುತ್ಥಳಿ ಇದೆ. ಸದ್ಯ ಕೆರೆ ಸೌಂದರ್ಯೀಕರಣ ಕಾಮಗಾರಿ ನಡೆಯುತ್ತಿದೆ. ವಿಹಾರ ಪಥ ನಿರ್ಮಾಣ, ಕೆರೆ ದಂಡೆ ಭಾಗದಲ್ಲಿ ಕಲ್ಲು ಅಳವಡಿಕೆ ಮೊದಲಾದ ಕಾಮಗಾರಿಗಳು ನಡೆಯುತ್ತಿವೆ.

ಬೇಂದ್ರೆ ನಿವಾಸ, ಕೆರೆ ಬದಿಯ ಬಸ್‌ ನಿಲ್ದಾಣದಲ್ಲಿ ಫಲಕಗಳಲ್ಲಿ ‘ಬಾರೋ ಸಾಧನ ಕೇರಿಗೆ’ ಎಂದು ಬರೆಯಲಾಗಿದೆ. ಕೆರೆ ಬದಿಯ ನಿಲ್ದಾಣದಲ್ಲಿ ಸಾಧನಾ ಕೇರಿಯ ಪಂಚಕಳಶಗಳು ದ.ರಾ.ಬೇಂದ್ರೆ, ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ, ಡಾ.ವರದರಾಜ ಹುಯಿಲಗೋಳ, ಶಂ.ಬಾ.ಜೋಶಿ, ಪಂಡಿತ ಚಂದ್ರಶೇಖರ ಪುರಾಣಿಕ ಮಠ ಅವರ ಪರಿಚಯ ಫಲಕಗಳು ಇವೆ.

ಧಾರವಾಡ ಸಾರಸ್ವತ ಲೋಕದ ದಿಗ್ಗಜ್ಜರು, ಸಾಧಕರ ಊರು. ಇಲ್ಲಿ ಎಲ್ಲ ಭಾಗಗಳಲ್ಲಿ ಸಾಧಕರು ನೆಲೆಸಿದ್ಧಾರೆ. ಹಲವು ಸಾಧಕರು ಆ ಪ್ರದೇಶದಲ್ಲಿ ಇದ್ದಿದ್ದರಿಂದ ಆ ಕೇರಿಗೆ ಸಾಧನಾ ಕೇರಿ ಎಂದು ಹೆಸರು ಬಂದಿರಬಹುದು ಎಂದು ಹಿರಿಯರು ಹೇಳುತ್ತಾರೆ.

ನಗರ ವ್ಯಾಪ್ತಿಯಲ್ಲಿ ಈ ಸಾಧನಾ ಕೇರಿಕ ಇದೆ. ನಗರದ ಗೌಜುಗದ್ದಲ ಇಲ್ಲ. ಸಾಹಿತ್ಯದ ದಿಗ್ಗಜ್ಜರು ಬಾಳಿದ, ಓಡಾಡಿದ ಧಾರವಾಡದ ಈ ತಾಣ ಭೇಟಿ ಹಿತ ನೀಡುತ್ತದೆ.

ಬೇಂದ್ರೆ ಅವರ ನಿವಾಸದ ಆವರಣದಲ್ಲಿ ಪ್ರವಾಸಿಗರು ಬಿ.ಎಂ.ಕೇದಾರನಾಥ ಬಿ.ಎಂ.ಕೇದಾರನಾಥ– ಪ‍್ರಜಾವಾಣಿ ಚಿತ್ರ
ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಭವನ ಬಿ.ಎಂ.ಕೇದಾರನಾಥ– ಪ‍್ರಜಾವಾಣಿ ಚಿತ್ರ
ಬೇಂದ್ರೆ ಅವರ ನಿವಾಸ ‘ಶ್ರೀಮಾತಾ’ ಬಿ.ಎಂ.ಕೇದಾರನಾಥ ಸಂಗ್ರಹ ಚಿತ್ರ
ಎಚ್‌.ವಿ.ಖಾಕಂಡಕಿ
ಡಾ.ಡಿ.ಎಂ.ಹಿರೇಮಠ

ಬೇಂದ್ರೆ ಟ್ರಸ್ಟ್‌ಗೆ ಜನರು ಭೇಟಿ ನೀಡುತ್ತಾರೆ. ಟ್ರಸ್ಟ್‌ ವತಿಯಿಂದ ಚಟುವಟಿಕೆಗಳು ನಡೆಯುತ್ತಿವೆ. ಬೇಂದ್ರ ಜನ್ಮದಿನ ಜನವರಿ.31. ಅಂದು ವಿಶ್ವ ಕವಿ ದಿನವಾಗಿ ಘೋಷಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ.

-ಡಾ.ಡಿ.ಎಂ.ಹಿರೇಮಠ ಅಧ್ಯಕ್ಷ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌

ಜ್ಞಾನಪೀಠ ಪುರಸ್ಕೃತ ಬೇಂದ್ರೆ ಅವರ ಕವಿತೆ ನಾಟಕ ಕತೆ ಮೊದಲಾದವನ್ನು ಪಠ್ಯದಲ್ಲಿ ಓದಿದ್ಧೇನೆ. ಅವರು ನೆಲೆಸಿದ್ದ ಮನೆ ಅವರು ಬಳಸುತ್ತಿದ್ದ ವಸ್ತುಗಳ ದರ್ಶನ ಮನಸ್ಸಿಗೆ ಖುಷಿ ನೀಡಿತು.

-ಎಸ್‌.ಕೆ.ವಿದ್ಯಾ ವಿದ್ಯಾರ್ಥಿನಿ ‌ಜೆ.ಎಸ್‌.ಎಸ್‌ ವಿದ್ಯಾಲಯ ಧಾರವಾಡ

ಮನೆಗೆ ಬಂದವರಿಗೆ ಸಕ್ಕರೆ

ಬೇಂದ್ರೆ ಅವರ ಮನೆಗೆ ಬಂದವರಿಗೆ ಒಂದು ಚಮಚ ಸಕ್ಕರೆ ಕೊಟ್ಟು ಬಾಯಿ ಸಿಹಿ ಮಾಡುವ ಪದ್ಧತಿ ಈಗಲೂ ಮುಂದುವರಿದಿದೆ. ನಿತ್ಯ ಹಲವರು ನಿವಾಸಕ್ಕೆ ಭೇಟಿ ನೀಡುತ್ತಾರೆ. ನಿವಾಸದ ಮುಂದೆ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ. ವಾರಾಂತ್ಯದಲ್ಲಿ ದಂಡು ಹೆಚ್ಚು ಇರುತ್ತದೆ. ಮನೆಗೆ ಬಂದ ಅತಿಥಿಗಳಿಗೆ ಚಹಾ ಕಾಫಿ ನೀಡುವ ಬದಲಿಗೆ ಸಕ್ಕರೆ ಕೊಡುವನ್ನು ಬೇಂದ್ರೆ ಅವರು ರೂಢಿಸಿದ್ದರು. ಈಗಲೂ ಅದನ್ನು ಮುಂದುವರಿಸಿದ್ದೇವೆ ಎಂದು ಕುಟುಂಬದವರು ಹೇಳುತ್ತಾರೆ.

‘ಕುಪ್ಪಳಿಯಂತೆ ಸಾಧನಾ ಕೇರಿ ಅಭಿವೃದ್ಧಿಪಡಿಸಿ’

ಕನ್ನಡ ಧಾರವಾಡದ ಮೇಲೆ ಬೇಂದ್ರೆ ಅವರ ಅಗಾಧ ಪ್ರಭಾವ ಇದೆ. ಅವರನ್ನು ನೋಡಿದ್ದು ಮಾತುಗಳನ್ನು ಕೇಳಿದ್ದು ನಮ್ಮ ಪುಣ್ಯ. ಸಾಧನ ಕೇರಿಯನ್ನು ಪ್ರವಾಸಿ ತಾಣವನ್ನು ಚೆನ್ನಾಗಿ ಅಭಿವೃದ್ಧಿ ಮಾಡಲು ಅವಕಾಶ ಇದೆ. ಕುವೆಂಪು ಊರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಅಭಿವೃದ್ಧಿ ಮಾಡಿರುವಂತೆ ಸಾಧನ ಕೇರಿಯನ್ನು ಅಭಿವೃದ್ಧಿ ಮಾಡಬೇಕು ಎಂದು ಲೇಖಕ ಎಚ್‌.ವಿ.ಖಾಕಂಡಕಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.