ADVERTISEMENT

ಹುಬ್ಬಳ್ಳಿ | ಸ್ಥಳಾಂತರವಾಗದ ಠಾಣೆ; ಮೇಲ್ಸೇತುವೆ ಕಾಮಗಾರಿ ವಿಳಂಬ

ಸ್ಥಳಂತರಕ್ಕೆ ಎರಡು ಬಾರಿ ಪತ್ರ ಬರೆದು ಸೂಚಿಸಿದ ಲೋಕೋಪಯೋಗಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 4:38 IST
Last Updated 5 ಅಕ್ಟೋಬರ್ 2025, 4:38 IST
<div class="paragraphs"><p>ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿ</p></div>

ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿ

   

ಪ್ರಜಾವಾಣಿ ಚಿತ್ರ: ಗುರು ಹಬೀಬ

ಹುಬ್ಬಳ್ಳಿ: ವರ್ಷದ ಹಿಂದೆಯೇ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಬೇಕಿದ್ದ ಮೇಲ್ಸೇತುವೆ, ಇದೀಗ 2026ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ, ನಿಧಾನಗತಿಯ ಕಾಮಗಾರಿ ಮತ್ತು ಉಪನಗರ ಪೊಲೀಸ್‌ ಠಾಣೆ ಕಟ್ಟಡದಲ್ಲಿರುವ ಕಚೇರಿಗಳು ಇನ್ನೂ ಸ್ಥಳಾಂತರವಾಗದ ಕಾರಣ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ADVERTISEMENT

ಕಾಮಗಾರಿಗಾಗಿ ಉಪನಗರ ಪೊಲೀಸ್‌ ಠಾಣೆ ಕಟ್ಟಡದ ಶೇ 60ರಷ್ಟು ಭಾಗವನ್ನು ನೆಲಸಮ ಮಾಡಲಾಗುತ್ತದೆ. ಜೂನ್‌ 30ರ ಒಳಗೆ ಅಲ್ಲಿದ್ದ ಕಚೇರಿಗಳನ್ನು ಸ್ಥಳಾಂತರಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಸೂಚಿಸಿತ್ತು. ಎರಡು ತಿಂಗಳು ಕಳೆದರೂ, ಕಚೇರಿಗಳ ಸ್ಥಳಾಂತರವಾಗಿಲ್ಲ. ಎರಡು ದಿನಗಳ ಹಿಂದಷ್ಟೇ ಮತ್ತೊಮ್ಮೆ ಪತ್ರ ಬರೆದು ಸೂಚಿಸಿದೆ. ನಿಧಾನಗತಿಯ ಕಾಮಗಾರಿಗೆ ಇದು ಸಹ ಕಾರಣವಾಗುತ್ತಿದೆ.

‘ಗಣೇಶ ಹಬ್ಬದ ಭದ್ರತೆ ಹಿನ್ನೆಲೆಯಲ್ಲಿ ಕಚೇರಿ ಸ್ಥಳಾಂತರಕ್ಕೆ ತಡವಾಗಿದೆ. ಉಪನಗರ ಠಾಣೆ, ಮಹಿಳಾ ಠಾಣೆಗಳ ಸ್ಥಳಾಂತರಕ್ಕೆ ಗೋಕುಲ ಠಾಣೆ, ವಿದ್ಯಾನಗರ ಠಾಣೆ ಮತ್ತು ಐಟಿ ಪಾರ್ಕ್‌ ಕಟ್ಟಡವನ್ನು ಪರಿಶೀಲಿಸಲಾಗಿದೆ. ಆದರೆ, ಇನ್ನೂ ಅಂತಿಮಗೊಳಿಸಿಲ್ಲ’ ಎಂದು ಪೊಲೀಸರು ಹೇಳುತ್ತಾರೆ.

ಸೆಪ್ಟೆಂಬರ್‌ ಅಂತ್ಯದೊಳಗೆ ಕೋರ್ಟ್‌ ವೃತ್ತ, ನಗರ ಮತ್ತು ಉಪನಗರ ಸಾರಿಗೆ ಬಸ್ ನಿಲ್ದಾಣ (ಹಳೇ ಬಸ್ ನಿಲ್ದಾಣ) ಎದುರು ಹಾಗೂ ಬಸವನದ ಬಳಿಯ ಕಾಮಗಾರಿ ಮುಕ್ತಾಯಗೊಳಿಸಿ, ಅಕ್ಟೋಬರ್‌  ಆರಂಭದಲ್ಲಿ ರಾಯಣ್ಣ ವೃತ್ತ, ಸಿದ್ದಪ್ಪ ಕಂಬಳಿ ಮಾರ್ಗದಲ್ಲಿ ಕಾಮಗಾರಿ ಆರಂಭಿಸುವುದಾಗಿ ಜಿಲ್ಲಾಡಳಿತ ಹೇಳಿತ್ತು. ಆದರೆ, ಹಳೇ ಬಸ್‌ ನಿಲ್ದಾಣ ಹಾಗೂ ಮೀಟಾ ಭಾರತ್‌ ಮಳಿಗೆ ಎದುರು ಒಟ್ಟು 10 ಗರ್ಡರ್‌ ಅಳವಡಿಕೆ ಬಾಕಿಯಿದೆ. ಜೊತೆಗೆ, ಕಾಂಕ್ರೀಟ್‌ ರಸ್ತೆ ಮತ್ತು ಗಟಾರ ಕಾಮಗಾರಿ ಸಹ ನಡೆಯಬೇಕಿದೆ.

‘2024ರ ಜೂನ್‌ 4ರಂದು ಕಾಮಗಾರಿ ಮುಕ್ತಾಯವಾಗಬೇಕಿತ್ತು. ಕಾರ್ಮಿಕರ ಕೊರತೆ, ಮಳೆಗಾಲ, ಕಾನೂನು ಸಮಸ್ಯೆ, ಭೂಸ್ವಾಧೀನ ಪ್ರಕ್ರಿಯೆ ಎಂದೆಲ್ಲ ನೆಪ ಹೇಳುತ್ತಿದ್ದಾರೆ. ಕಾಮಗಾರಿಗಾಗಿ ನಾಲ್ಕು ತಿಂಗಳು ರಸ್ತೆ ಬಂದ್‌ ಮಾಡಿದ್ದರಿಂದ ತೀವ್ರ ನಷ್ಟ ಅನುಭವಿಸಿದ್ದೇವೆ. ಈಗಾಗಲೇ ಸಾಕಷ್ಟು ವ್ಯಾಪಾರಸ್ಥರು ಮಳಿಗೆಯ ಬಾಡಿಗೆ ಹಣ ಸಹ ತುಂಬಲಾಗದೆ, ಬಿಟ್ಟು ಹೋಗಿದ್ದಾರೆ. ಆದಷ್ಟು ಬೇಗ ಕಾಮಗಾರಿ ಮುಕ್ತಾಯಗೊಳಿಸಬೇಕು’ ಎಂದು ಹಳೇ ಬಸ್‌ ನಿಲ್ದಾಣದ ಬಳಿಯ ವ್ಯಾಪಾರಿ ರಾಜೇಂದ್ರ ಕದಂ ಹೇಳುತ್ತಾರೆ.

‘ರಾಯಣ್ಣ ವೃತ್ತದಿಂದ ಅಶೋಕ ಟವರ್‌ವರೆಗೆ ಸ್ವಾಧೀನವಾಗುವ ಖಾಸಗಿ ಜಮೀನುಗಳ ಮಾಲೀಕರಿಗೆ ಈಗಾಗಲೇ ಪರಿಹಾರ ಮೊತ್ತ ನೀಡಲಾಗಿದೆ. ಕೆಲವು ಜಮೀನುಗಳ ಮಾಲೀಕರು ಕಾಗದ ಪತ್ರಗಳನ್ನು ಸರಿಯಾಗಿ ನೀಡದ ಕಾರಣ, ಪರಿಹಾರ ನಿಡಲು ಸಾಧ್ಯವಾಗಿಲ್ಲ. ಅವರ ಹೆಸರಲ್ಲಿ ಸರ್ಕಾರದಿಂದ ಈಗಾಗಲೇ ಡಿ.ಡಿ ಬಂದಿದ್ದು, ಕಾಗದ ಪತ್ರ ನೀಡಿದ ನಂತರ ವಿತರಿಸಲಾಗುವುದು’ ಎಂದು ಎನ್‌ಎಚ್‌ ಪಿಡಬ್ಲ್ಯೂಡಿ ಎಂಜಿನಿಯರ್‌ ಸತೀಶ ನಾಗನೂರು ಹೇಳಿದರು.

ಉಪನಗರ ಪೊಲೀಸ್‌ ಠಾಣೆಯಲ್ಲಿನ ಕಚೇರಿಗಳ ಸ್ಥಳಾಂತರಕ್ಕೆ ಈಗಾಗಲೇ ಎರಡು ಬಾರಿ ಪತ್ರ ಬರೆದು ಸೂಚಿಸಲಾಗಿದೆ. ಗಣೇಶ ಹಬ್ಬದ ನಂತರ ಸ್ಥಳಾಂತರಗೊಳಿಸುವುದಾಗಿ ತಿಳಿಸಿದ್ದರು. ಇನ್ನೂ ಸ್ಥಳಾಂತರವಾಗಿಲ್ಲ.
– ಸತಿಶ ನಾಗನೂರು, ಎಂಜಿನಿಯರ್‌ ಎನ್‌ಎಚ್‌ ಪಿಡಬ್ಲ್ಯೂಡಿ ಹುಬ್ಬಳ್ಳಿ

‘ಬಿಆರ್‌ಟಿಎಸ್‌ ನಿಲ್ದಾಣ ತೆರವು’

‘ಈಗಿರುವ ಉಪನಗರ ಪೊಲೀಸ್‌ ಠಾಣೆ ಎದುರು ನಾಲ್ಕು ಬೃಹತ್‌ ಫಿಲ್ಲರ್‌ಗಳು ಹಾಗೂ ರಾಯಣ್ಣ ವೃತ್ತದ ಹೈಮಾಸ್ಟ್‌ ದೀಪ ಕಂಬದ ಬಳಿ ಒಂದು ಫಿಲ್ಲರ್‌ ನಿರ್ಮಾಣವಾಗಲಿದೆ. ಮೇಲ್ಸೇತುವೆ ಕೆಳಭಾಗದ ರಸ್ತೆಯ ಎರಡೂ ಕಡೆ 7.50 ಮೀಟರ್‌ ಜಾಗವನ್ನು ಸರ್ವಿಸ್‌ ರಸ್ತೆ ಹಾಗೂ ಪಾದಚಾರಿ ಮಾರ್ಗಕ್ಕೆ ಮೀಸಲಿಡಲಾಗುವುದು. ಪಾಲಿಕೆ ಉದ್ಯಾನದ ಎದುರಿನ ಟೈಟಾನ್‌ ಐ ಶೋರೂಮ್‌ ಎದುರು ಮೇಲ್ಸೇತುವೆ ಮುಕ್ತಾಯವಾಗಲಿದೆ. ಅಲ್ಲಿರುವ ಬಿಆರ್‌ಟಿಎಸ್‌ ನಿಲ್ದಾಣ ತೆರವುಗೊಳಿಸಿ ಲ್ಯಾಮಿಂಗ್ಟನ್‌ ರಸ್ತೆಯ ಹೋಟೆಲ್‌ ಸ್ವಯಂ ಎದುರು ನಿರ್ಮಿಸಲಾಗುತ್ತದೆ’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.