ADVERTISEMENT

ಡೊಳ್ಳು, ಭಜನೆ, ಜಗ್ಗಲಿಗೆ ನಾದವೇ ಡಿಜೆ: ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ

ಸೌಹಾರ್ದ ಸಭೆ: ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 16:03 IST
Last Updated 19 ಆಗಸ್ಟ್ 2025, 16:03 IST
   

ಹುಬ್ಬಳ್ಳಿ: ‘ಹಬ್ಬದ ಸಂದರ್ಭದಲ್ಲಿ ಡಿಜೆ ಬಳಕೆ ಇತ್ತೀಚಿಗಿನ ವರ್ಷಗಳಿಂದ ಆರಂಭವಾಗಿದೆ. ಹಿಂದೂ ಪರಂಪರೆಯಲ್ಲಿ ಡೊಳ್ಳು ಕುಣಿತ, ಭಜನೆ, ಜಗ್ಗಲಿಗಳ ನಾದವೇ ಡಿಜೆ ಆಗಿದೆ’ ಎಂದು ಮೂರು ಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹು-ಧಾ ಮಹಾನಗರ ಪೊಲೀಸ್ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ‘ಸೌಹಾರ್ದ ಸಭೆ’ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ರಾತ್ರಿ 10ರವರೆಗೆ ಮಾತ್ರ ಡಿಜೆ ಬಳಸಲು ಅವಕಾಶವಿದ್ದು, ಸಮಯ ವಿಸ್ತರಿಸಲು ಪೊಲೀಸ್‌ ಕಮಿಷನರ್‌ಗೆ ವಿನಂತಿಸುವಂತೆ ಕೆಲವು ಗಣೇಶ ಸಮಿತಿಯ ಮುಖಂಡರು ವಿನಂತಿಸಿದ್ದರು. ಅವಕಾಶವಿದ್ದರೆ, ಎರಡು ತಾಸು ಹೆಚ್ಚು ವಿಸ್ತರಿಸಲು ಇಲಾಖೆ ಯೋಚಿಸಬಹುದು. ಅವಕಾಶವಿಲ್ಲದಿದ್ದರೂ, ಭಕ್ತಿಗೆ ಭಂಗ ಬರದ ರೀತಿಯಲ್ಲಿ ವಿಶೇಷ ವಾದ್ಯ–ಮೇಳಗಳನ್ನು ಬಳಸಿ ಹಬ್ಬ ಆಚರಿಸಬೇಕು. ಹುಬ್ಬಳ್ಳಿಯಲ್ಲಿ ಎಲ್ಲ ಧರ್ಮದವರೂ ಪ್ರೀತಿ–ವಿಶ್ವಾಸದಿಂದ ಹಬ್ಬಗಳನ್ನುಆಚರಿಸುತ್ತಿರುವುದು ಸಾಮರಸ್ಯದ ಸಂಕೇತ’ ಎಂದರು.

ADVERTISEMENT

ಮುಸ್ಲಿಂ ಧರ್ಮಗುರು ತಾಜುದ್ದೀನ್‌ಪಿರ್‌ ಖಾದ್ರಿ ಮಾತನಾಡಿ, ‘ಇಸ್ಲಾಂ ಧರ್ಮದಲ್ಲಿ ಧ್ವನಿವರ್ಧಕ ಬಳಸಲು ಅವಕಾಶವಿಲ್ಲ. ಈ ವರ್ಷದಿಂದ ಅದನ್ನು ಬಳಸದಿರುವಂತೆ ಎಲ್ಲ ಮುತುವಲ್ಲಿಗಳು ಸೇರಿ ನಿರ್ಣಯ ಕೈಗೊಂಡು, ಅಂಜುಮನ್‌ ಸಂಸ್ಥೆಯಿಂದ ಠರಾವು ಪಾಸು ಮಾಡಲಾಗಿದೆ. ಹಿಂದೂಗಳ ಹಬ್ಬಕ್ಕೆ ಬಳಸಲು ನಾವು ವಿರೋಧಿಸುವುದಿಲ್ಲ. ಹಬ್ಬಕ್ಕೆ ನಮ್ಮ ಸಮುದಾಯ ಸಂಪೂರ್ಣ ಸಹಕಾರ ನೀಡಲಿದೆ. ದೇಶದ ಅಭಿವೃದ್ಧಿಗೆ ಶಿಕ್ಷಣ ಮತ್ತು ಆರೋಗ್ಯ ಮುಖ್ಯವಾಗಿದೆ’ ಎಂದು ಹೇಳಿದರು.

‘ಗಣೇಶ ಮೂರ್ತಿ ನೋಡಲು ಬರುವ ಭಕ್ತರಿಗೆ ಕೆಲವು ಕಿಡಿಗೇಡಿಗಳು ಸಮಸ್ಯೆ ಮಾಡುತ್ತಾರೆ. ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಪೆಂಡಾಲ್‌ಗಳ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಬೇಕು. ಚನ್ನಮ್ಮ ವೃತ್ತದ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಳಿಸಿ, ಬಂದ್‌ ಮಾಡಿರುವ ರಸ್ತೆ ಮುಕ್ತಗೊಳಿಸಬೇಕು. ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ಧಾರ್ಮಿಕ ಭಾವನೆಗೆ ಬೆಲೆಕೊಟ್ಟು ಡಿಜೆ ಬಳಕೆಗೆ ಅವಕಾಶ ಕಲ್ಪಿಸಬೇಕು’ ಎಂದು ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಅಧ್ಯಕ್ಷ ಮೋಹನ‌ ಲಿಂಬಿಕಾಯಿ ಆಗ್ರಹಿಸಿದರು.

ಡಿಸಿಪಿ ಮಹಾನಿಂಗ ನಂದಗಾವಿ, ಶಹರ ತಹಶೀಲ್ದಾರ್ ಮಹೇಶ ಗಸ್ತಿ, ಪಾಲಿಕೆ ಹೆಚ್ಚುರಿ ಆಯುಕ್ತ ವಿಜಯಕುಮಾರ್, ಪಾಲಿಕೆ ಸದಸ್ಯ ಇಮ್ರಾನ್ ಯಲಿಗಾರ, ಉದ್ಯಮಿ ವಿ.ಎಸ್.ವಿ.‌ ಪ್ರಸಾದ್, ರಮೇಶಕುಮಾರ, ಅಲ್ತಾಫ್ ಕಿತ್ತೂರು, ಮಹೇಂದ್ರ ಸಿಂಘಿ, ಗುರುನಾಥ ಉಳ್ಳಿಕಾಶಿ ಇತರರು ಇದ್ದರು.

ಶಾಂತಿ ಕದಡುವವರ ಗಡಿಪಾರು: ಶಶಿಕುಮಾರ್‌

‘ಪದೇಪದೇ ಅಪರಾಧ ಪ್ರಕರಣದಲ್ಲಿ ಪಾಲ್ಗೊಂಡು ಸಮಾಜದ ಶಾಂತಿ ಕದಡುವವರ ಪಟ್ಟಿ ಹಬ್ಬದ ಹಿನ್ನೆಲೆಯಲ್ಲಿ ಸಿದ್ಧವಾಗುತ್ತಿದ್ದು, ಶೀಘ್ರದಲ್ಲಿಯೇ ಅವರನ್ನು ಗಡಿಪಾರು ಮಾಡಲಾಗುವುದು’ ಎಂದು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಹೇಳಿದರು.

‘ಪ್ರಸ್ತುತ ವರ್ಷ ನಾಲ್ಕು ಮಂದಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಕೋರ್ಟ್‌ ಅದನ್ನು ಮಾನ್ಯ ಮಾಡಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಎಂಬತ್ತಕ್ಕೂ ಹೆಚ್ಚು ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಅತ್ಯಾಚಾರ, ಪೋಕ್ಸೊ ಪ್ರಕರಣದಲ್ಲಿ ಭಾಗಿಯಾದವರನ್ನು ಸಹ ಪರೇಡ್‌ ನಡೆಸಿ ವಿಚಾರಣೆ ನಡೆಸಲಾಗುವುದು’ ಎಂದರು.

‘ಸಮಾಜ ಘಾತುಕ ಶಕ್ತಿ ಎಲ್ಲ ಸಮುದಾಯದಲ್ಲೂ ಇದ್ದಾರೆ. ಆಯಾಯ ಪ್ರದೇಶದ ಮುಖಂಡರು ಜವಾಬ್ದಾರಿ ವಹಿಸಬೇಕು. ಶಾಂತಿಭಂಗ ಮಾಡುವವರ ವಿರುದ್ಧ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಈ ವರ್ಷವೂ ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಯಾಗುತ್ತಿದೆ. ಸಾಂಪ್ರದಾಯಕ ಸಂಗೀತ ಬಳಸಿ, ಸೌಹಾರ್ದವಾಗಿ ಹಬ್ಬ ಆಚರಿಸಬೇಕು’ ಎಂದು ಹೇಳಿದರು.

‘ರಸ್ತೆ ದುರಸ್ತಿ, ಸಂಚಾರ ಮಾರ್ಗ ಬದಲಾವಣೆ, ವಾಹನ ಪಾರ್ಕಿಂಗ್‌ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯದ ಕುರಿತು ಸಾರ್ವಜನಿಕರಿಂದ ಬೇಡಿಕೆಗಳು ಬಂದಿವೆ. ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಜೊತೆ ಸಭೆ ನಡೆಯಲಿದ್ದು, ಅಲ್ಲಿ ಪರಿಹಾರಕ್ಕೆ ಚರ್ಚಿಸಲಾಗುವುದು’ ಎಂದು ಕಮಿಷನರ್‌ ಭರವಸೆ ನೀಡಿದರು.

ಸೌಹಾರ್ದ ಸಭೆಯಲ್ಲಿ ‘ಗುಂಡಿ’ ಸದ್ದು

ಗಣೇಶ ಮತ್ತು ಈದ್‌ ಮೀಲಾದ್‌ ಹಬ್ಬದ ಸೌಹಾರ್ದ ಸಭೆಯಲ್ಲಿ, ವಿವಿಧ ಧರ್ಮದ ಧರ್ಮಗಳು ಸೇರಿ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಗುಂಡಿ ಬಿದ್ದ ರಸ್ತೆಗಳ ಕುರಿತು ಮಾತನಾಡಿದರು. ಹಬ್ಬ ಸಮೀಪಿಸುತ್ತಿದ್ದರೂ, ಪಾಲಿಕೆ ಗುಂಡಿ ಮುಚ್ಚುವಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುತವಲ್ಲಿ ರಾಜೇಸಾಬ್ ಸಿಕಂದರ್, ಸಂಗೀತಾ ದೇವದಾಸ, ಶೇಖರಯ್ಯ ಮಠಪತಿ, ಶಿವಾನಂದ ಮುತ್ತಣ್ಣವರ, ಅಲ್ತಾಫ್‌ ಕಿತ್ತೂರು, ಮೋಹನ ಲಿಂಬಿಕಾಯಿ ರಸ್ತೆ ದುರಸ್ತಿಗೆ ಆಗ್ರಹಿಸಿದರು. ‘ಪ್ರತಿವರ್ಷವೂ ಹಬ್ಬದ ಸಂದರ್ಭ ಇದೇ ಸಮಸ್ಯೆ ಎದುರಾಗುತ್ತಿದೆ. ಪಾಲಿಕೆ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು’ ಎಂದು ಒತ್ತಾಯಿಸಿದರು.

ಡಿಜೆ ಬಳಕೆಗೆ ಅನುಮತಿ ನೀಡುವಂತೆ ಸಾಕಷ್ಟು ಗಣೇಶ ಸಮಿತಿಗಳು ವಿನಂತಿಸಿವೆ. ಸುಪ್ರೀಂ ಕೋರ್ಟ್ ನಿರ್ದೇಶನ ಮೀರಿ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ
–ಎನ್‌. ಶಶಿಕುಮಾರ್‌, ಕಮಿಷನರ್‌, ಹು–ಧಾ ಮಹಾನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.