ಬಂಧನ
ಹುಬ್ಬಳ್ಳಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಯುವಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
‘ಯುವಕನು ಪ್ರೀತಿ ಮಾಡುವುದಾಗಿ ಬಾಲಕಿಯನ್ನು ನಂಬಿಸಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು, ಆತನನ್ನು ಹಿಡಿದು ಪ್ರಶ್ನಿಸಿದ್ದಾರೆ. ಈ ವೇಳೆ ಆತ ತನ್ನ ಹೆಸರು ರಮೇಶ ಎಂದು ಹೇಳಿದ್ದ. ಸಂಶಯಗೊಂಡ ಸ್ಥಳೀಯರು, ಆತನ ಮೊಬೈಲ್ ಪಡೆದು ಪರಿಶೀಲಿಸಿದಾಗ ಬಾಲಕಿ ಜತೆಗಿನ ಅಶ್ಲೀಲ ಫೋಟೊ, ವಿಡಿಯೊಗಳು ಪತ್ತೆಯಾಗಿವೆ. ಈ ವೇಳೆ ಥಳಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆತನನ್ನು ಗೋಕುಲ ರಸ್ತೆ ಠಾಣೆಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ವಶ: ತಾಲ್ಲೂಕಿನ ಗಂಗಿವಾಳ ಗ್ರಾಮದಲ್ಲಿ ₹4.36 ಲಕ್ಷ ಮೌಲ್ಯದ ಪಡಿತರ ಅಕ್ಕಿ ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡಲು ಯತ್ನಿಸಿದ್ದ ಹುಬ್ಬಳ್ಳಿಯ ಸದಾನಂದ ಬುರ್ಲಿ ಹಾಗೂ ಸಚಿನ್ ಜರತಾರಘರ್ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಪಡಿತರದಾರರಿಗೆ ನೀಡಬೇಕಾದ 45 ಕೆ.ಜಿ. ತೂಕದ 80 ಅಕ್ಕಿ ಚೀಲಗಳು ಹಾಗೂ ಇನ್ನಿತರ 136 ಚೀಲಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಆಹಾರ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ತಿಳಿಸಿದರು.
ವಸ್ತುಗಳ ಕಳವು: ಇಲ್ಲಿನ ಉಣಕಲ್ ಗ್ರಾಮದ ರಾಜೇಂದ್ರ ಮುಟಗಿ ಎಂಬುವರ ಖಾಲಿ ಜಾಗದಲ್ಲಿ ತಡೆಗೋಡೆ ನಿರ್ಮಿಸಲು ಇಟ್ಟಿದ್ದ ₹1.53 ಲಕ್ಷ ಮೌಲ್ಯದ ಸಿಮೆಂಟ್ ವಸ್ತುಗಳ ಕಳವು ನಡೆದಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.