ಹುಬ್ಬಳ್ಳಿಯ ಹಳೇ ಕೋರ್ಟ್ವೃತ್ತದ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯಿಂದ ಹಾಗೂ ಜಿಟಿಜಿಟಿ ಮಳೆಯಿಂದಾಗಿ ಶನಿವಾರ ರಸ್ತೆ ಸಂಪೂರ್ಣ ಕೆಸರುಮಯವಾಗಿತ್ತು
ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ: ನಗರದಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರದ ಮಧ್ಯಾಹ್ನದವರೆಗೆ ನಿರಂತರ ಸುರಿದ ಜಿಟಿಜಿಟಿ ಮಳೆಗೆ, ಚನ್ನಮ್ಮ ವೃತ್ತ ಹಾಗೂ ಹಳೇ ಕೋರ್ಟ್ವೃತ್ತದ ಸುತ್ತಮುತ್ತಲಿನ ಪ್ರದೇಶ ಕೆಸರುಮಯವಾಗಿತ್ತು.
ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಯ ಫಿಲ್ಲರ್ ನಿರ್ಮಾಣಕ್ಕಾಗಿ ತೆಗ್ಗು ತೋಡಿರುವ ಮಣ್ಣು ರಸ್ತೆಯ ಅಕ್ಕಪಕ್ಕವೇ ರಾಶಿ ಹಾಕಲಾಗಿತ್ತು. ವಾರದ ಹಿಂದಷ್ಟೇ ಬಂದ್ ಮಾಡಲಾಗಿದ್ದ ರಸ್ತೆಯನ್ನು ಸಹ ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗಿದೆ. ಹೀಗಾಗಿ, ರಾಶಿಹಾಕಿದ್ದ ಮಣ್ಣು ಜಿಟಿಜಿಟಿ ಮಳೆಗೆ ಕೆಸರಾಗಿ ರಸ್ತೆಯನ್ನೆಲ್ಲ ರಾಡಿಯಾಗಿಸಿದೆ.
ಹಳೇ ಕೋರ್ಟ್ ರಸ್ತೆಯ ಎದುರು ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಾರ್ ಪಾರ್ಕಿಂಗ್ ಕಟ್ಟಡದ ನೆಲಮಹಡಿಯಲ್ಲಿ ಸಂಗ್ರಹವಾದ ನೀರನ್ನು, ಪೈಪ್ ಮೂಲಕ ಸಾಯಿಬಾಬಾ ಗುಡಿ ಎದುರಿನ ರಸ್ತೆಗೆ ಬಿಡಲಾಗುತ್ತಿದೆ. ಆ ನೀರು ಸಂಗೊಳ್ಳಿ ರಾಯಣ್ಣ ವೃತ್ತ, ಉಪನಗರ ಪೊಲೀಸ್ ಠಾಣೆ ತಿರುವಿನಲ್ಲಿ ಸಂಗ್ರಹವಾದ ಕಾರಣ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸಿದರು.
‘ಮಳೆಗಾಲದ ಸಂದರ್ಭ ರಸ್ತೆ ಬಂದ್ ಆಗಿದ್ದರಿಂದ ಸಮಸ್ಯೆ ಕಂಡಿರಲಿಲ್ಲ. ಇದೀಗ ರಸ್ತೆ ಮುಕ್ತಗೊಳಿಸಿದ್ದು, ಮೇಲ್ಸೇತುವೆ ಕಾಮಗಾರಿಯ ಅವಾಂತರ ಕಾಣಿಸುತ್ತಿದೆ. ಫಿಲ್ಲರ್ ನಿರ್ಮಿಸಲು ತೆಗ್ಗು ತೆಗೆದ ಮಣ್ಣನ್ನು ಬೇರೆಡೆ ಸಾಗಿಸದೆ ಅಲ್ಲಿಯೇ ಇಟ್ಟಿದ್ದರಿಂದ, ಸಣ್ಣ ಮಳೆಗೂ ರಸ್ತೆ ಕೆಸರಾಗುತ್ತಿದೆ. ಬಹುಮಹಡಿ ಕಾರ್ ಪಾರ್ಕಿಂಗ್ ಸ್ಥಳದ ನೀರನ್ನು ಅವೈಜ್ಞಾನಿಕವಾಗಿ ರಸ್ತೆಯ ಮೇಲೆ ಹರಿಸಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಗಜಾನನ ಶಿರವಾಡ್ಕರ್ ಆಕ್ರೋಶ ವ್ಯಕ್ತಪಡಿಸಿದರು.
‘ಕೋರ್ಟ್ ವೃತ್ತದ ಸುತ್ತಮುತ್ತ ಹಾಗೂ ಹಳೇ ಬಸ್ ನಿಲ್ದಾಣದ ಎದುರು ಬೈಕ್ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಕೆಸರಿನಲ್ಲಿ ನಡೆಯಲಾಗದೆ ಪಾದಚಾರಿಗಳು, ಬೈಕ್ ಸವಾರರು ಪರದಾಡುತ್ತಿದ್ದಾರೆ’ ಎಂದು ವ್ಯಾಪಾರಿ ನಿಜಗುಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.