ಹುಬ್ಬಳ್ಳಿ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, 2026ರ ಮಾರ್ಚ್ ಅಂತ್ಯದಲ್ಲಿಯೂ ಮುಕ್ತಾಯವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ.
2021ರ ಜೂನ್ 4ರಂದು ಕಾಮಗಾರಿಗೆ ಕಾರ್ಯಾದೇಶ ನೀಡಿ, 2024ರ ಜೂನ್ 4ರ ಒಳಗೆ ಮುಗಿಸಲು ಗಡುವು ನೀಡಲಾಗಿತ್ತು. ಕಾರ್ಮಿಕರ ಕೊರತೆ, ಮಳೆಗಾಲ, ಕಾನೂನು ತೊಡಕು ಇನ್ನಿತರ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಹ ಅದಕ್ಕೆ ಸ್ಪಂದಿಸಿ, ಕಾಲಾವಧಿ ವಿಸ್ತರಿಸುತ್ತಲೇ ಬಂದಿದ್ದಾರೆ. ಆದರೆ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದ್ದ ರಸ್ತೆ, ಚರಂಡಿ ಕಾಮಗಾರಿ ಸಹ ಇನ್ನೂ ಆರಂಭವಾಗಿಲ್ಲ. ಇದು ಸಾರ್ವಜನಿಕರ ಹಾಗೂ ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ತ್ವರಿತ ಕಾಮಗಾರಿಗಾಗಿ ಏಪ್ರಿಲ್ 19ರಿಂದ ಆಗಸ್ಟ್ 20ರವರೆಗೆ ಚನ್ನಮ್ಮ ವೃತ್ತದಿಂದ ಬಸವವನ ಹಾಗೂ ಚನ್ನಮ್ಮ ವೃತ್ತದಿಂದ ಹಳೇಕೋರ್ಟ್ ವೃತ್ತದವರೆಗೆ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ಕಾಲಾವಧಿಯಲ್ಲಿ ಈ ಮಾರ್ಗದ ಎಲ್ಲ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ, ಶೇ 70ರಷ್ಟು ಕಾಮಗಾರಿ ಮಾತ್ರ ಮುಕ್ತಾಯವಾಗಿದೆ. ಅಯೋಧ್ಯಾ ಹೋಟೆಲ್ ಹಾಗೂ ಮೀಠಾ ಭಾರತ್ ಎದುರು ಗರ್ಡರ್ ಅಳವಡಿಕೆ ಇನ್ನೂ ಆರಂಭವಾಗಿಲ್ಲ. ರಸ್ತೆ ಕಾಮಗಾರಿ ಸಹ ನಡೆದಿಲ್ಲ.
‘ನಾಲ್ಕೂವರೆ ತಿಂಗಳು ಸಂಪೂರ್ಣ ವಾಹನಗಳ ಸಂಚಾರ ಸ್ಥಗಿತಗೊಳಿಸಿದರೂ, ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈಗ ಕಾಟಾಚಾರಕ್ಕೆ ಎನ್ನುವಂತೆ ಏಕಮುಖವಾಗಿ ವಾಹನಗಳನ್ನು ಸಂಚರಿಸಲು ರಸ್ತೆ ಮುಕ್ತಗೊಳಿಸಿದ್ದಾರೆ. ಮತ್ತೊಂದು ಭಾಗದಲ್ಲಿ ರಸ್ತೆ ಕಾಮಗಾರಿ ನಡೆಸುತ್ತೇವೆ ಎಂದು, ರಸ್ತೆ ಬಂದ್ ಮಾಡಿ ಎರಡು ತಿಂಗಳು ಕಳೆದರೂ ಇನ್ನೂ ಆರಂಭವಾಗಿಲ್ಲ. ವ್ಯಾಪಾರಸ್ಥರ ಹಾಗೂ ಸಾರ್ವಜನಿಕರ ಸಮಸ್ಯೆ ಜನಪ್ರತಿನಿಧಿಗಳಿಗೆ ಅರ್ಥವಾಗುತ್ತಿಲ್ಲ’ ಎಂದು ಹಳೇಬಸ್ ನಿಲ್ದಾಣದ ಬಳಿಯ ಬಟ್ಟೆ ವ್ಯಾಪಾರಿ ಶಿವಾನಂದ ರಾಜಾರಾಮ್ ಹೇಳಿದರು.
‘ಚನ್ನಮ್ಮ ವೃತ್ತದ ಸುತ್ತ ಮೇಲ್ಸೇತುವೆಯ ರೋಟರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದು ಪೂರ್ಣವಾದ ನಂತರವೇ ಮೀಠಾ ಭಾರತ್ ಎದುರು ಗರ್ಡರ್ ಅಳವಡಿಸಲು ಸಾಧ್ಯ. ನಗರದ ಪ್ರಮುಖ ವೃತ್ತವಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ತಾತ್ಕಾಲಿಕವಾಗಿ ತೆಗ್ಗು ಬಿದ್ದಿರುವ ಕಡೆ, ಜೆಲ್ಲಿಕಡಿ ಹಾಕಿ ರಸ್ತೆ ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸುತ್ತೇನೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಡಾಂಬರು ರಸ್ತೆ ನಿರ್ಮಿಸಿದರೆ ಒಂದೆರಡು ವರ್ಷಕ್ಕೇ ಹಾಳಾಗುತ್ತದೆ ಎಂದು ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅದಕ್ಕಾಗಿ ರಸ್ತೆ ಕಾಮಗಾರಿ ವಿಳಂಬವಾಗಿದೆಮಹೇಶ ಟೆಂಗಿನಕಾಯಿ ಶಾಸಕ
ಪಿಲ್ಲರ್ ನಿರ್ಮಾಣ ಆರಂಭ
ಚನ್ನಮ್ಮ ವೃತ್ತದ ಈದ್ಗಾ ಮೈದಾನದ ಬಳಿ ಕಾಮತ್ ಹೋಟೆಲ್ ಎದುರು ಹಾಗೂ ಹೊಸೂರು ವೃತ್ತದ ಬಳಿ ಮುಂದುವರಿದ ಭಾಗವಾಗಿ ಪಿಲ್ಲರ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಪರಿಣಾಮ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದೆ. ಬಸವವನದಿಂದ ಚನ್ನಮ್ಮ ವೃತ್ತದವರೆಗೆ ಅಯೋಧ್ಯಾ ಹೊಟೆಲ್ ಎದುರಿನ ಮಾರ್ಗವನ್ನು ರಸ್ತೆ ಕಾಮಗಾರಿಗಾಗಿ ಬಂದ್ ಮಾಡಿರುವುದರಿಂದ ಸಂಜೆ ವೇಳೆ ಬಸ್ ನಿಲ್ದಾಣ ಹಾಗೂ ಚನ್ನಮ್ಮ ವೃತ್ತದ ಬಳಿ ಓಡಾಡಲು ಸಾಧ್ಯವಾಗುತ್ತಿಲ್ಲ. ರಸ್ತೆಗಳು ಸಹ ತೆಗ್ಗು ಬಿದ್ದಿರುವುದರಿಂದ ಬೈಕ್ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ. ಪಾದಚಾರಿಗಳಿಗೂ ಓಡಾಡಲು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದರೂ ಅವರ ಗಮನಕ್ಕೆ ಬರದಿರುವುದು ವಿಪರ್ಯಾಸ’ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಧರ ಕಂದಗಲ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.