ಹುಬ್ಬಳ್ಳಿ: 'ಪ್ರಸ್ತುತ ವರ್ಷದಿಂದ ನಗರದ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗುತ್ತಿದೆ' ಎಂದು ಮೇಯರ್ ಈರೇಶ ಅಂಚಟಗೇರಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪಾಲಿಕೆ ಸದನ ಸಮಿತಿ ವರದಿ ಅನ್ವಯ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಆರು ಸಂಘಟನೆಗಳು ಮನವಿ ಸಲ್ಲಿಸಿದ್ದು, ಅವುಗಳಲ್ಲಿ ಒಂದು ಸಂಘಟನೆಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಪ್ರಸ್ತುತ ವರ್ಷ ಮೂರು ದಿನಗಳವರೆಗೆ ಮಾತ್ರ ಉತ್ಸವಕ್ಕೆ ಅವಕಾಶ ನೀಡಲಾಗಿದೆ' ಎಂದರು.
'ಆರು ಸಂಘಟನೆಗಳಲ್ಲಿ ಯಾವ ಸಂಘಟನೆಗಳಿಗೆ ನೀಡಬೇಕು ಎನ್ನುವುದು ಮೇಯರ್ ವಿವೇಚನೆಗೆ ಬಿಡಲಾಗಿದೆ. ಮಂಗಳವಾರ ಬೆಳಿಗ್ಗೆ ಸದನ ಸಮಿತಿ ಸದಸ್ಯರ ಜೊತೆ ಚರ್ಚಿಸಿ ಒಂದು ಸಂಘಟನೆ ಹೆಸರು ಅಂತಿಮ ಮಾಡಲಾಗುವುದು. ಉಳಿದ ಸಂಘಟನೆಗಳು ಅವರಿಗೆ ಅವಕಾಶ ನೀಡಬೇಕು' ಎಂದು ಹೇಳಿದರು.
ಎಲ್ಲ ಗಣೇಶೋತ್ಸವ ಸಮಿತಿಗೆ ಇರುವ ನಿಯಮಾವಳಿಗಳೇ, ಈದ್ಗಾ ಮೈದಾನದಲ್ಲೂ ಪ್ರತಿಷ್ಠಾಪಿಸುವ ಗಣೇಶೋತ್ಸವ ಸಮಿತಿಗೂ ಅನ್ವಯವಾಗಲಿದೆ. ಈಗಿನ ಧ್ವಜಕಟ್ಟೆಯ ಸನಿಹ ಮೂರ್ತಿ ಪ್ರತಿಷ್ಠಾಪನೆ ಮಾಡಬಹುದು. ಉತ್ಸವ ಹೇಗೆ ಆಚರಿಸಬೇಕೆನ್ನುವುದು ಉತ್ಸವ ಸಮಿತಿಗೆ ಬಿಟ್ಟ ವಿಚಾರ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.