ಹುಬ್ಬಳ್ಳಿ: ‘ವಾಹನ ಚಲಾಯಿಸುವಾಗ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು. ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್ ಎಂ. ಹೇಳಿದರು.
ಇಲ್ಲಿನ ವಿದ್ಯಾನಗರದ ಬಿವಿಬಿ ಕಾಲೇಜು ಬಳಿಯ ಬಿಆರ್ಟಿಎಸ್ ಬಸ್ ನಿಲ್ಬಾಣದ ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗ, ಪ್ರಾದೇಶಿಕ ಸಾರಿಗೆ ಕಚೇರಿ, ಪೊಲೀಸ್ ಇಲಾಖೆ ಹಾಗೂ ಬಿವಿಬಿ ಕಾಲೇಜಿನ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
‘ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದರೂ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಂಚಾರ ನಿಯಮಗಳ ಉಲ್ಲಂಘನೆಯೇ ಕಾರಣ. ಸಾರ್ವಜನಿಕರು ವಾಹನ ಚಲಾಯಿಸುವಾಗ ಹೆಚ್ಚು ಜಾಗರೂಕತೆ ವಹಿಸಬೇಕು. ವೇಗದಲ್ಲಿ ಮಿತಿ ಇರಬೇಕು’ ಎಂದರು.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರಕಾಶ ತೆವಾರಿ, ‘ಯಾವುದೇ ತುರ್ತು ಕೆಲಸವಿದ್ದರೂ ನಿಧಾನವಾಗಿ ವಾಹನ ಚಲಾಯಿಸಬೇಕು. ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್ ಹಾಗೂ ಕಾರು ಚಾಲನೆ ವೇಳೆ ಸೀಟ್ ಬೆಲ್ಟ್ ಹಾಕಿಕೊಳ್ಳುವುದು ಕಡ್ಡಾಯ. ವಾಹನಗಳ ಚಾಲನೆ ವೇಳೆ ಅಗತ್ಯ ದಾಖಲೆ ಹೊಂದಿರಬೇಕು’ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ, ‘ಪ್ರತಿಯೊಬ್ಬ ನಾಗರಿಕ ರಸ್ತೆ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ವೇಗದ ಮಿತಿ ನಿಯಂತ್ರಣದಲ್ಲಿ ಇರಬೇಕು. ಮದ್ಯಪಾನ ಸೇವಿಸಿ ವಾಹನ ಚಲಾಯಿಸಬಾರದು. ಸಾರಿಗೆ ಕಚೇರಿಯಲ್ಲಿ ಒಂದು ವರ್ಷಕ್ಕೆ ಸುಮಾರು 32 ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ಎಲ್ಲರೂ ಸುರಕ್ಷತೆಯಿಂದ ವಾಹನ ಚಲಾಯಿಸಬೇಕು‘ ಎಂದರು.
ಸಹಾಯಕ ಪೊಲೀಸ್ ಆಯುಕ್ತ ವಿನೋದ ಮುಕ್ತೆದಾರ, ‘18 ವರ್ಷದ ಒಳಗಿನವರಿಗೆ ವಾಹನ ಚಲಾಯಿಸಲು ಕೊಡಬಾರದು. ಜೀವ ಅಮೂಲ್ಯವಾಗಿದ್ದು, ಅದನ್ನು ಕಳೆದುಕೊಳ್ಳಬೇಡಿ‘ ಎಂದು ಸಲಹೆ ನೀಡಿದರು.
ಇದೇ ವೇಳೆ ಬಿಆರ್ಟಿಎಸ್ ಬಸ್ ನಿಲ್ಬಾಣದಿಂದ ಕೋತಂಬ್ರಿ ಕಾಲೇಜಿನ ವೃತ್ತದವರೆಗೆ ರಸ್ತೆ ಸುರಕ್ಷತಾ ಜಾಥಾ ನಡೆಯಿತು.
ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ಧಲಿಂಗೇಶ, ವಿವೇಕಾನಂದ ವಿಶ್ವಜ್ಞ, ಎಸ್.ಡಿ.ಬೆಲ್ಲದ, ಜಿ.ವಿ.ದಿನಮಣಿ, ಗುರುಪ್ರಸಾದ, ಅಬ್ದುಲ್ ಸಲಾಂ ಧಾರವಾಡವಾಲೆ, ಶಂಕರ ಕಲಾಲ್, ಗೃಹ ರಕ್ಷಕದಳ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿವಿಬಿ ಕಾಲೇಜಿನ ಪ್ರಾಧ್ಯಾಪಕಿ ರಂಜಿತಾ ನಿರೂಪಿಸಿ, ವಂದಿಸಿದರು.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.