ಹುಬ್ಬಳ್ಳಿ:ನಗರದ ಗೋಕುಲ ರಸ್ತೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ, ಶ್ರೀಗಂಧ ಮರದ ತುಂಡುಗಳನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಐಬಿ (ನಗರ ಅಪರಾಧ ತನಿಖಾ ದಳ) ಮತ್ತು ಗೋಕುಲ ರಸ್ತೆ ಪೊಲೀಸರು ಬಂಧಿಸಿದ್ದಾರೆ.
ಸಹದೇವನಗರದ ಸಿದ್ಧಾರೂಢ ಉಪ್ಪಾರ ಅಲಿಯಾಸ್ ಸಿದ್ದು (22) ಮತ್ತು ಕಿರಣ ಗಡಾದ (26) ಬಂಧಿತರು. ಇವರಿಂದ ₹34 ಸಾವಿರ ಮೌಲ್ಯದ 17 ಕೆ.ಜಿ ಶ್ರೀಗಂಧದ ತುಂಡುಗಳು, 2 ಬೈಕ್ ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಮಂಗಳವಾರ ರಾತ್ರಿ 10ರ ಸುಮಾರಿಗೆ ಬಸ್ ನಿಲ್ದಾಣದ ಬಳಿ ಶ್ರೀಗಂಧ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮೇರೆಗೆ ಕಾರ್ಯಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಸಿಐಬಿ ಇನ್ಸ್ಪೆಕ್ಟರ್ ಅಲ್ತಾಫ ಎಂ., ಗೋಕುಲ ರಸ್ತೆ ಠಾಣೆಯ ಎಎಸ್ಐ ಎಫ್.ಐ. ತಡಸಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಮಿಕ ಸಾವು:
ತಾಲ್ಲೂಕಿನ ವರೂರು ಗ್ರಾಮದಲ್ಲಿನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಕಾರ್ಮಿಕರೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ. ಪಂಚಾಕ್ಷರಯ್ಯ ಮಹಾಂತಯ್ಯ ಹಿರೇಮಠ (46) ಮೃತರು.
ಕಟ್ಟಡ ನಿರ್ಮಾಣ ಕಾರ್ಮಿಕರಾದ ಪಂಚಾಕ್ಷರಯ್ಯ ಅವರು, ಸೆ. 1ರಂದು ಗ್ರಾಮದ ಗುಣಧರನಂದಿ ಮಹಾರಾಜರ ಕಾಲೇಜಿನ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು. ಈ ವೇಳೆ, ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.